HEALTH TIPS

ಸ್ಥಳೀಯ ಭಾಷೆಗಳನ್ನು ಬಳಸಿ ಭಾರತೀಯ ಇತಿಹಾಸದ 'ಪುನರ್ರಚನೆ'ಯನ್ನು ಕೈಗೆತ್ತಿಕೊಂಡ ಐಸಿಎಚ್‌ಆರ್

                 ವದೆಹಲಿ:ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್‌ಆರ್)ಯು ಸ್ಥಳೀಯ ಭಾಷೆಗಳು ಮತ್ತು ಲಿಪಿಗಳಲ್ಲಿ ಲಭ್ಯವಿರುವ ಮೂಲಗಳನ್ನು ಬಳಸಿಕೊಂಡು ಸಿಂಧು ಕಣಿವೆಯ ನಾಗರಿಕತೆಯ ಕಾಲದಿಂದ ಹಿಡಿದು ಇಂದಿನವರೆಗಿನ ಭಾರತದ ಇತಿಹಾಸವನ್ನು ಮರಳಿ ಬರೆಯುವ ಯೋಜನೆಗೆ ಚಾಲನೆ ನೀಡಿದೆ.

                   'ತಪ್ಪಿ ಹೋಗಿರುವ' ರಾಜ ಮನೆತನಗಳಿಗೆ ಸೂಕ್ತ ಮನ್ನಣೆಯನ್ನು ನೀಡುವುದು ಮತ್ತು ಐರೋಪ್ಯ ಕೇಂದ್ರಿತ ರೀತಿಯಲ್ಲಿ ರಚನೆಗೊಂಡ ಪಠ್ಯಗಳನ್ನು 'ಸರಿಪಡಿಸುವುದು' ಯೋಜನೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು hindustantimes.com ವರದಿ ಮಾಡಿದೆ.

                'ಭಾರತದ ಸಮಗ್ರ ಇತಿಹಾಸ' ಶೀರ್ಷಿಕೆಯ ಯೋಜನೆಯು 12-14 ಸಂಪುಟಗಳನ್ನು ಹೊಂದಿರಲಿದೆ ಮತ್ತು ಮುಂದಿನ 3-4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮೊದಲ ಸಂಪುಟವು 2023, ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಐಸಿಎಚ್‌ಆರ್ ನ ಸದಸ್ಯ ಕಾರ್ಯದರ್ಶಿ ಉಮೇಶ ಕದಂ ಸೋಮವಾರ ಇಲ್ಲಿ ತಿಳಿಸಿದರು. ಈ ಯೋಜನೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ದೇಶಾದ್ಯಂತದ 100ಕ್ಕೂ ಅಧಿಕ ಇತಿಹಾಸಕಾರರು ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಡಿ ಭಾರತದ ಕುರಿತು ಪ್ರತಿಯೊಂದನ್ನೂ ಸ್ಥಳೀಯ ಮೂಲಗಳ ಮೂಲಕ ಪುನಃ ಬರೆಯಲಾಗುವುದು ಎಂದರು.

                  ಯೋಜನೆಯು ಭಾರತೀಯ ಹೆಮ್ಮೆಯನ್ನು ಪ್ರತಿನಿಧಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸಲಿದೆ ಮತ್ತು 'ಭೌಗೋಳಿಕ ರಾಜಕೀಯ ದೃಷ್ಟಿಕೋನ'ದ ಬದಲು 'ಭೂ-ಸಾಂಸ್ಕೃತಿಕ ದೃಷ್ಟಿಕೋನ'ದ ಮೂಲಕ ಭಾರತೀಯ ಇತಿಹಾಸವನ್ನು ಪ್ರಸ್ತುತ ಪಡಿಸಲಿದೆ ಎಂದು ಕದಂ ತಿಳಿಸಿದರು.

                   'ಮರಾಠರಿಗೂ ಇತಿಹಾಸದಲ್ಲಿ ಸೂಕ್ತ ಮನ್ನಣೆಯನ್ನು ನೀಡಲಾಗಿಲ್ಲ. 17 ಮತ್ತು 18ನೇ ಶತಮಾನಗಳನ್ನು ಭಾರತದಲ್ಲಿ ಮುಘಲರ ಅವನತಿ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯ ಕಾಲವೆಂದು ನೋಡುತ್ತಿದ್ದೇವೆ. ಆದರೆ ಈ ಎಲ್ಲ ಶತಮಾನಗಳು ಮರಾಠರ ಕುರಿತಾಗಿವೆ. ಇದೇ ರೀತಿ ನಮ್ಮ ಇಂದಿನ ಇತಿಹಾಸವು ಇತರ ಹಲವು ರಾಜ ಮನೆತನಗಳ ಕುರಿತು ಹೇಳುತ್ತಿಲ್ಲ. ಉದಾಹರಣೆಗೆ ಅಸ್ಸಾಮಿನ ಅಹೋಮ್ ರಾಜವಂಶವು 600 ವರ್ಷಗಳಿಗೂ ಅಧಿಕ ಆಡಳಿತವನ್ನು ನಡೆಸಿತ್ತು ಮತ್ತು ಮುಘಲರು ಹೆಚ್ಚೆಂದರೆ 180 ವರ್ಷಗಳ ಕಾಲ ಆಳಿದ್ದರು. ಈವರೆಗೆ ಇತಿಹಾಸದಲ್ಲಿ ಅಹೋಮ್ಗಳಿಗೇಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಲಾಗಿಲ್ಲ 'ಎಂದು ಕದಂ ಪ್ರಶ್ನಿಸಿದರು.

                ಸಿದ್ಧಾಂತದಿಂದ ಪ್ರಭಾವಿತವಾಗಿರದಿದ್ದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಇತಿಹಾಸವನ್ನು ಪುನರ್ರಚಿಸುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ದಿಲ್ಲಿ ವಿವಿಯಲ್ಲಿ ಇತಿಹಾಸದ ಸಹಪ್ರಾಧ್ಯಾಪಕರಾಗಿರುವ ನರೇಂದ್ರ ಪಾಂಡೆ ಹೇಳಿದರು.

               ಯೋಜನೆಯಡಿ ಪ್ರತಿಯೊಬ್ಬರಿಗೂ ಸೂಕ್ತ ಮನ್ನಣೆ ದೊರೆಯಲಿದೆ ಎಂದು ಹೇಳಿದ ಕದಂ,'ನಾವು ಯಾವುದೇ ಧರ್ಮದ ವಿರುದ್ಧವಾಗಿಲ್ಲ. ಪ್ರತಿಯೊಬ್ಬರ ಇತಿಹಾಸವನ್ನು ಗುರುತಿಸಬೇಕು ಮತ್ತು ಹೆಮ್ಮೆಯಿಂದ ಪ್ರತಿನಿಧಿಸಲ್ಪಡಬೇಕು ಹಾಗೂ ಎಲ್ಲರಿಗೂ ಸೂಕ್ತ ಗೌರವವನ್ನು ನೀಡಬೇಕು ಎಂದು ನಾವು ಬಯಸಿದ್ದೇವೆ. ಮುಘಲರು ಇತಿಹಾಸದಲ್ಲಿ ಇರಲಿದ್ದಾರೆ,ಆದರೆ ನಾವು ಮರಾಠರು,ಅಹೋಮ್ಗಳು ಮತ್ತು ಇತರರಿಗೂ ಸಮಾನ ಮಹತ್ವವನ್ನು ನೀಡಲಿದ್ದೇವೆ 'ಎಂದರು.

             ಐಸಿಎಚ್‌ಆರ್ ಭಾರತದ ವಿವಿಧ ಸ್ಥಳೀಯ ಭಾಷೆಗಳಲ್ಲಿ ಲಭ್ಯವಿರುವ ಐತಿಹಾಸಿಕ ಮೂಲಗಳ ಡಿಜಿಟಲೀಕರಣವನ್ನು ಆರಂಭಿಸಿದೆ. ಡಿಜಿಟೈಸ್ ಮಾಡಲಾದ ದಾಖಲೆಗಳನ್ನು ಐಸಿಎಚ್‌ಆರ್ ವೆಬ್ಸೈಟ್ನಲ್ಲಿ ಲಭ್ಯವಾಗಿಸಲಾಗುವುದು ಮತ್ತು ಅವು ಭಾರತೀಯ ದೃಷ್ಟಿಕೋನದಿಂದ ದೇಶದ ಇತಿಹಾಸವನ್ನು ತಿಳಿದುಕೊಳ್ಳಲು ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳಿಗೆ ನೆರವಾಗಲಿವೆ ಎಂದೂ ಕದಂ ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries