ನವದೆಹಲಿ:ಕಳೆದ ವಾರ ಉ.ಪ್ರದೇಶದ ಮಥುರಾದ ಯಮುನಾ ಎಕ್ಸ್ಪ್ರೆಸ್ವೇ(Yamuna Expressway) ಬಳಿ ಸೂಟ್ಕೇಸ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ ದಿಲ್ಲಿಯ ಆಯುಷಿ ಚೌಧರಿ(Ayushi Chaudhary) (22)ಯನ್ನು ಆಕೆಯ ತಂದೆಯೇ ಗುಂಡಿಟ್ಟು ಕೊಂದಿದ್ದ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಕೊಲೆ ಆರೋಪದಲ್ಲಿ ಆಯುಷಿಯ ಹೆತ್ತವರನ್ನು ಬಂಧಿಸಲಾಗಿದೆ. ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಳು ಮತ್ತು ಆಗಾಗ್ಗೆ ತಡರಾತ್ರಿಯವರೆಗೆ ಮನೆಯಿಂದ ಹೊರಗಿರುತ್ತಿದ್ದಳು ಎಂಬ ಕಾರಣಕ್ಕೆ ಕ್ರುದ್ಧನಾಗಿದ್ದ ತಂದೆ ನಿತೇಶ ಯಾದವ ಆಕೆಯನ್ನು ಗುಂಡಿಟ್ಟು ಕೊಂದಿದ್ದ. ಆಯುಷಿಯ ತಾಯಿ ಮತ್ತು ಸೋದರನಿಗೆ ಈ ವಿಷಯ ತಿಳಿದಿತ್ತು ಎಂದು ಮಥುರಾದ ಪ್ರಭಾರ ಎಸ್ಎಸ್ಪಿ ಮಾರ್ತಾಂಡ ಪ್ರಕಾಶ ಸಿಂಗ್ (Marthanda Prakash Singh)ಸುದ್ದಿಗಾರರಿಗೆ ತಿಳಿಸಿದರು.
ಶವದ ಗುರುತು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ರವಿವಾರ ಬೆಳಿಗ್ಗೆ ಅಪರಿಚಿತ ದೂರವಾಣಿ ಕರೆಯ ಮೂಲಕ ಆಕೆಯ ಗುರುತಿನ ಬಗ್ಗೆ ದೃಢವಾದ ಮಾಹಿತಿ ಲಭಿಸಿತ್ತು. ಆಯುಷಿಯ ತಾಯಿ ಮತ್ತು ಸಹೋದರ ಫೋಟೊಗಳಿಂದ ಆಕೆಯನ್ನು ಗುರುತಿಸಿದ್ದಾರೆ ಎಂದರು.
ಶವವನ್ನು ಗುರುತಿಸಲು ತೆರಳಿದ್ದ ದಕ್ಷಿಣ ದಿಲ್ಲಿಯ ನಿವಾಸಿ ನಿತೇಶ ಯಾದವ(Nitesh Yadav)ನನ್ನು ಪ್ರಶ್ನಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೊಲೆಗೆ ಬಳಕೆಯಾಗಿದ್ದ ಪಿಸ್ತೂಲಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪರವಾನಿಗೆಯಿದ್ದ ಪಿಸ್ತೂಲಿನಿಂದ ಆಯುಷಿಯ ಕೊಲೆ ಮಾಡಿದ್ದ ನಿತೇಶ ಬಳಿಕ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಮಥುರಾದಲ್ಲಿ ಎಸೆದಿದ್ದ.
ಉ.ಪ್ರದೇಶದ ಗೋರಖಪುರ ಜಿಲ್ಲೆಯ ಬಲುನಿ ಮೂಲದ ಕುಟುಂಬವು ನಿತೇಶ ಯಾದವಗೆ ದಿಲ್ಲಿಯಲ್ಲಿ ಕೆಲಸ ಲಭಿಸಿದ ಬಳಿಕ ಅಲ್ಲಿಗೆ ಸ್ಥಳಾಂತರಗೊಂಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.