ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣವನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಬೇಕೆಂದು ವಕೀಲರೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಕೀಲರಾದ ಜೊಶಿನಾ ಟುಲಿ ಈ ಸಂಬಂಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸುಮಾರು ಆರು ತಿಂಗಳ ಹಿಂದೆ ಘಟನೆ ನಡೆದಿರುವುದರಿಂದ ಪ್ರಕರಣದ ತನಿಖೆ ದೆಹಲಿ ಪೊಲೀಸರಿಗೆ ಕಷ್ಟವಾಗುತ್ತಿದೆ.
ಸಿಬ್ಬಂದಿ ಕೊರತೆ ಹಾಗೂ ಸಾಕ್ಷ್ಯಾಧಾರ ಮತ್ತು ಸಾಕ್ಷಿಗಳನ್ನು ಪತ್ತೆ ಹಚ್ಚಲು ಅಗತ್ಯ ತಾಂತ್ರಿಕ ಮತ್ತು ವೈಜ್ಞಾನಿಕ ಉಪಕರಣಗಳ ಕೊರತೆಯಿಂದಾಗಿ ತನಿಖೆಯನ್ನು ಸಮರ್ಥವಾಗಿ ನಡೆಸಲು ಅವರಿಗೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಶೋಧ ಕಾರ್ಯಾಚರಣೆಯ ಸ್ಥಳ ಹಾಗೂ ನ್ಯಾಯಾಲಯದ ಕೊಠಡಿಯಲ್ಲಿ ಮಾಧ್ಯಮದವರು ಮತ್ತು ಇತರರ ಉಪಸ್ಥಿತಿ, ಸಾಕ್ಷ್ಯಗಳು ಮತ್ತು ಸಾಕ್ಷಿದಾರರ ವಿಷಯದಲ್ಲಿ ಹಸ್ತಕ್ಷೇಪ ಉಂಟು ಮಾಡುತ್ತಿದೆ. ಘಟನೆ ನಡೆದ ಸ್ಥಳವನ್ನು ದೆಹಲಿ ಪೊಲೀಸರು ಇಲ್ಲಿಯವರೆಗೆ ಸೀಲ್ ಮಾಡಿಲ್ಲ. ಸಾರ್ವಜನಿಕರು ಮತ್ತು ಮಾಧ್ಯಮ ಸಿಬ್ಬಂದಿ ನಿರಂತರವಾಗಿ ಆ ಸ್ಥಳವನ್ನು ಪ್ರವೇಶಿಸುತ್ತಿದ್ದಾರೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ದೆಹಲಿ ಪೊಲೀಸರು ತನಿಖೆಯ ಮಾಹಿತಿಯನ್ನು, ಅಪರಾಧದ ದೃಶ್ಯಗಳು ಮತ್ತು ಸಂಗ್ರಹಿಸಿದ ದೃಶ್ಯಗಳನ್ನು ಬಹಿರಂಗಪಡಿಸುತ್ತಿದ್ದು, ಇದರಿಂದ ಪ್ರತಿದಿನವೂ ಸಾಕ್ಷ್ಯ ದುರ್ಬಲಗೊಳ್ಳುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕೊಲೆ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಮತ್ತು ಆತನ ಪ್ರೇಯಸಿ ಶ್ರದ್ಧಾ ವಾಲಕರ್ ಹತ್ಯೆಗೈದು ದೇಹವನ್ನು ಕತ್ತರಿಸಿ 35 ತುಂಡಗಳಾಗಿಸಿದ್ದ. ಇಬ್ಬರೂ ಮೆಹ್ರೌಲಿಯ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದರು.