ಮಂಗಳೂರು: ಮಂಗಳೂರಿನಲ್ಲಿ
ಚಲಿಸುತ್ತಿದ್ದ ಆಟೋದಲ್ಲಿ ಬಾಂಬ್ ಸ್ಫೋಟಗೊಂಡಿದ್ದ ಪ್ರಕರಣದ ಬಗ್ಗೆ ದೃಢಪಡದ ಯಾವುದೇ
ಮಾಹಿತಿಯನ್ನು ಹಂಚಿಕೊಳ್ಳದಂತೆ ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಜನರಿಗೆ
ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ, ಸ್ಫೋಟಕ್ಕೆ ಸಂಬಂಧಿಸಿದ್ದೆಂದು ಹೇಳಲಾಗುತ್ತಿರುವ ವೀಡಿಯೋ
ಒಂದು ವೈರಲ್ ಆಗಿದ್ದು, ಅದರಲ್ಲಿ ಇಬ್ಬರು ವ್ಯಕ್ತಿಗಳು ವೈನ್ ಅಂಗಡಿ ಮುಂದೆ ಬ್ಯಾಗ್
ಹಿಡಿದಿರುವುದು ಕಂಡುಬಂದಿದೆ.
ಈ ಬಗ್ಗೆ ಪೊಲೀಸ್ ಆಯುಕ್ತರು ಮಾತನಾಡಿದ್ದು, "ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಈ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಪೊಲೀಸರಿಗೆ ಕೆಲವು ದೃಢಪಡದ ವಿಡಿಯೋಗಳು ದೊರೆತಿವೆ, ಇದರಲ್ಲಿ ಇಬ್ಬರು ವ್ಯಕ್ತಿಗಳು ವೈನ್ ಶಾಪ್ ಬಳಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ಇಂತಹ ದೃಢಪಡದ ವೀಡಿಯೋಗಳನ್ನು ಹಂಚಿಕೊಳ್ಳಬೇಡಿ" ಎಂದು ಆಯುಕ್ತರು ಮನವಿ ಮಾಡಿದ್ದಾರೆ. ಶಂಕಿತ ಉಗ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.
ಸ್ಫೋಟ ಸಂಭವಿಸುತ್ತಿದ್ದಂತೆಯೇ ಆಟೋಚಾಲಕ ಪುರುಷೋತ್ತಮ್ ಗೆ ಹಾಗೂ ಆರೋಪಿ ಮೊಹಮ್ಮದ್ ಶಾರೀಕ್ ಗೆ ಬೆಂಕಿ ತಗುಲಿತ್ತು, ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ರಕ್ಷಣೆಗೆ ಮುಂದಾಗಿದ್ದರು.
ನ,20 ರಂದು ಪೊಲೀಸರು ಬಾಂಬರ್ ನ್ನು ತೀರ್ಥಹಳ್ಳಿಯ ಶಾರೀಖ್ ಎಂದು ಗುರುತಿಸಿದ್ದರು. ಈತನಿಗೆ ಇಸ್ಲಾಮಿಕ್ ಸ್ಟೇಟ್ ನಂಟಿದ್ದು 2022 ರ ಸೆಪ್ಟೆಂಬರ್ ನಿಂದಲೂ ಪೊಲೀಸರು ಹುಡುಕುತ್ತಿದ್ದರು.