ಶಬರಿಮಲೆ: ಮಂಡಲ- ಮಕರ ಬೆಳಕು ಉತ್ಸವಗಳಿಗೆ ಶಬರಿಮಲೆ ದೇಗುಲದ ಗರ್ಭಗೃಹದ ಬಾಗಿಲು ನಿನ್ನೆ ಸಂಜೆ ತೆರೆಯಲಾಗಿದೆ. ಕೊರೋನಾ ಸಾಂಕ್ರಾಮಿಕದ ಬಳಿಕ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಇದೇ ಮೊದಲಬಾರಿಗೆ ಭಾರೀ ಪ್ರಮಾಣದ ಭಕ್ತರ ನಿರೀಕ್ಷೆಗಳೊಂದಿಗೆ ಬಾಗಿಲು ತೆರೆಯಲಾಗಿದೆ.
ದೇಗುಲದ ತಂತ್ರಿ ಕಂಠರರ್ ರಾಜೀವರ ನೇತೃತ್ವದಲ್ಲಿ ನೂತನ ಪ್ರಧಾನ ಅರ್ಚಕ (ಮೇಲ್ಶಾಂತಿ) ಎನ್. ಪರಮೇಶ್ವರನ್ ನಂಬೂದಿರಿ ಅವರು ದೇಗುಲದ ಬಾಗಿಲು ತೆರೆದರು. ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಮೊದಲ ದಿನವೇ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಮಧ್ಯಾಹ್ನದಿಂದಲೇ ಕಾನನಪಥದಲ್ಲಿ ಸರತಿ ಸಾಲು ನಿರ್ಮಾಣವಾಗಿತ್ತು. ನಿಯೋಜಿತ ಶಬರಿಮಲೆ, ಮಾಳಿಗಪ್ಪುರ ಮೇಲ್ಶಾಂತಿಗಳು 18ನೇ ಮೆಟ್ಟಿಲು ಹತ್ತಿ ದರ್ಶನ ಪಡೆದರು. ಇದರ ನಂತರ ಭಕ್ತರು ಸನ್ನಿಧಾನವನ್ನು ಪ್ರವೇಶಿಸಿದರು.
ಕಳೆದ ಎರಡು ವರ್ಷದಲ್ಲಿ ಕೊರೋನಾ ನಿರ್ಬಂಧಗಳು ಇದ್ದವು. ಈ ಬಾರಿ ತೀರ್ಥಯಾತ್ರೆಯ ಋತುವು ನಿರ್ಬಂಧಗಳಿಲ್ಲದೆ ಪ್ರಾರಂಭವಾಗಿದೆ. ಆದರೆ ವರ್ಚುವಲ್ ಕ್ಯೂ ಬುಕಿಂಗ್ ಕಡ್ಡಾಯವಾಗಿದೆ. ಮೊದಲ ದಿನವೇ ಸುಮಾರು 60,000 ಮಂದಿ ದರ್ಶನಕ್ಕೆ ಬುಕ್ ಮಾಡಿದ್ದಾರೆ. ರಜಾ ದಿನಗಳಲ್ಲಿ 80 ಸಾವಿರಕ್ಕೂ ಹೆಚ್ಚು ಭಕ್ತರು ಬುಕ್ ಮಾಡಿದ್ದಾರೆ.
ಶರಣಂ ಧ್ವನಿ ಮೊಳಗಿ ಬಾಗಿಲು ತೆರೆದ ಶಬರಿಮಲೆ ಸನ್ನಿಧಿ
0
November 16, 2022
Tags