ಮಂಜೇಶ್ವರ: ಮಂಜೇಶ್ವರದ ರಾಗಸುಧಾ ಸಂಗೀತಶಾಲೆಯು ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ವಿಕಾಸ ಮೀಯಪದವು ಹಾಗೂ ಊರ ಪರವೂರ ಡಾ. ಬನಾರಿ ಅಭಿಮಾನಿಗಳ ಸಹಕಾರದೊಂದಿಗೆ ಜ. 8 ರಂದು ಭಾನುವಾರ ಮೀಯಪದವಿನ ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಮಂಜೇಶ್ವರದಿಂದ ವೃತ್ತಿ ನಿವೃತ್ತಿ ಹೊಂದಿ ಸುಳ್ಯದ ಗುಡ್ಯಡ್ಕದಲ್ಲಿ ನೆಲೆಸಿದ ಸಾಹಿತಿ ವೈದ್ಯ ಹಾಗೂ ಯಕ್ಷಗಾನ ಅರ್ಥಧಾರಿ ಡಾ. ರಮಾನಂದ ಬನಾರಿಯವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಧ್ಯಾಹ್ನ ಸಂಗೀತಶಾಲೆಯ ವಿದ್ಯಾರ್ಥಿಗಳಿಂದ ರಾಗಾಭಿನಂದನ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಮೀಯಪದವಿನ ಹಿರಿಯ ಪಾಕತಜ್ಞ ಟಿ. ಶ್ರೀಕೃಷ್ಣ ಹೊಳ್ಳ ಚಾಲನೆ ನೀಡುವರು. ಅಪರಾಹ್ನ 4 ಕ್ಕೆ ಅಭಿನಂದನಾ ಕಾರ್ಯಕ್ರಮ ಜರಗಲಿದ್ದು, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆದ ಎಂ. ಎಸ್. ಮಹಾಬಲೇಶ್ವರ ಕಾರ್ಯಕ್ರಮ ಉದ್ಘಾಟಿಸಲಿರುವರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಡಾ. ಎಂ. ಪ್ರಭಾಕರ ಜೋಷಿ ಅಭಿನಂದನ ಭಾಷಣ ಮಾಡುವರು. ಸಾಹಿತಿ ಡಾ. ವಸಂತಕುಮಾರ ಪೆರ್ಲ ಹಾಗೂ ನಾಟಕಕಾರ ಶಶಿರಾಜ್ ಕಾವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಡಾ. ಮುರಳೀಮೋಹನ ಚೂಂತಾರು, ಕೆ. ಆರ್. ಜಯಾನಂದ, ಬಿ.ವಿ.ರಾಜನ್, ಹರ್ಷಾದ್ ವರ್ಕಾಡಿ, ಹರಿಶ್ಚಂದ್ರ ಮಂಜೇಶ್ವರ, ಪದ್ಮನಾಭ ಕಡಪ್ಪರ, ಕೊಣಾಜೆ ಶಂಕರ ಭಟ್, ಶ್ರೀಧರ ರಾವ್ ಆರ್. ಎಂ., ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮೊದಲಾದ ಗಣ್ಯರ ಉಪಸ್ಥಿತಿ ಇರಲಿದೆ. ಬಳಿಕ ರಾಗಸುಧಾ ವಿದ್ಯಾರ್ಥಿಗಳಿಂದ ರಮಾನಂದ ಬನಾರಿ ಬರೆದ ಗೀತೆಗಳ ಪ್ರಸ್ತುತಿ ಹಾಗೂ ಶ್ರೀಕೃಷ್ಣಸಂಧಾನ ಎಂಬ ಯಕ್ಷಗಾನ ತಾಳಮದ್ದಲೆ ಜರಗಲಿದೆ ಎಂದು ರಾಗಸುಧಾ ಸಂಚಾಲಕ ವಿಶ್ವನಾಥ ಭಟ್ ಕೆ. ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
8 ರಂದು ಡಾ. ಬನಾರಿಯವರಿಗೆ ಅಭಿನಂದನ ಕಾರ್ಯಕ್ರಮ
0
January 04, 2023
Tags