ತಿರುವನಂತಪುರಂ: ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ತಪಾಸಣೆ ನಡೆಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಪರವಾನಗಿ ಅಥವಾ ನೋಂದಣಿ ಇಲ್ಲದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ಪರವಾನಗಿ ಹೊಂದಿದ್ದರೂ ಅನೈರ್ಮಲ್ಯ, ಕಲಬೆರಕೆ ಅಥವಾ ಅವಧಿ ಮೀರಿದ ಆಹಾರ ಪೂರೈಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಆಹಾರ ಸುರಕ್ಷತಾ ಇಲಾಖೆಯು ರಜಾದಿನಗಳಿಗೆ ಸಂಬಂಧಿಸಿದಂತೆ ‘ಆಪರೇಷನ್ ಹಾಲಿಡೇ’ ಎಂಬ ವಿಶೇಷತಪಾಸಣೆ ನಡೆಸಿತು. ರಜೆಯ ನಂತರ ಕೆಲ ಪ್ರಕರಣಗಳು ವರದಿಯಾದಾಗ ಮತ್ತೆ ವ್ಯಾಪಕ ತಪಾಸಣೆಗೆ ಆದೇಶ ನೀಡಲಾಗಿದೆ.
ಆಹಾರ ಕಲಬೆರಕೆ ಮತ್ತು ಅವಧಿ ಮೀರಿದ ಆಹಾರವನ್ನು ನೀಡುವುದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಂತಹ ಯಾವುದೇ ಕಲಬೆರಕೆ ಆಹಾರ ಅಥವಾ ಅವಧಿ ಮೀರಿದ ಆಹಾರ ತಪಾಸಣೆ ವೇಳೆ ಲಭಿಸಿದಲ್ಲಿ ಸಂಸ್ಥೆಯ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪರವಾನಗಿ ರದ್ದುಪಡಿಸಿದರೆ, ನಂತರ ಅದನ್ನು ಪಡೆಯಲು ಸುಲಭಸಾಧ್ಯವಾಗದು. ಯಾವುದೇ ಮುಲಾಜುಗಳಿಲ್ಲದೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿರುವರು.
ಜನರ ಆರೋಗ್ಯ ಮತ್ತು ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ವಿಷಯವಾಗಿದೆ. ಈ ನಿಟ್ಟಿನಲ್ಲಿ, ಎಲ್ಲಾ ಸಂಸ್ಥೆಗಳ ಕಡೆಯಿಂದ, ವಿಶೇಷÀವಾಗಿ ಆಹಾರವನ್ನು ತಯಾರಿಸುವ ಮತ್ತು ವಿತರಿಸುವವರ ಕಡೆಯಿಂದ ಅತ್ಯಂತ ಖಚಿತವಾದ ಜಾಗರೂಕತೆ ಇರಬೇಕು. ಆಹಾರ ಸುರಕ್ಷತಾ ಅಧಿಕಾರಿಯ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು ಪರವಾನಗಿ ಪಡೆದಿವೆ ಅಥವಾ ನೋಂದಣಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ದೂರುಗಳ ಮೇಲೆ ಸರಿಯಾದ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದಕ್ಕೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರಿಗೆ ತಿಳಿಸಲು ಆಹಾರ ಸುರಕ್ಷತಾ ಇಲಾಖೆಯ ಪೋರ್ಟಲ್ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿರುವರು. ಇದು ಸಾರ್ವಜನಿಕರಿಗೆ ಪೋಟೋಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡುವ ಸೌಲಭ್ಯವನ್ನು ಹೊಂದಿರುತ್ತದೆ. ಪ್ರತಿ ದೂರಿನ ಬಗ್ಗೆಯೂ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿರುವರು.
ಎಲ್ಲ 14 ಜಿಲ್ಲೆಗಳಲ್ಲಿ ವ್ಯಾಪಕ ತಪಾಸಣೆ: ಸಿಕ್ಕಿಬಿದ್ದರೆ ಪರವಾನಗಿ ರದ್ದು; ಆಹಾರ ಸುರಕ್ಷತೆ ಪರಿಶೀಲನೆಗೆ ಸಚಿವರಿಂದ ಸೂಚನೆ
0
January 04, 2023