ಕಾಸರಗೋಡು: ಕಳೆದೆರಡು ವರ್ಷಗಳಲ್ಲಿ ಸರ್ಕಾರಿ ನೌಕರರು ಹಲವು ಹೋರಾಟಗಳ ಮೂಲಕ ಗಳಿಸಿದ ಲೀವ್ ಸರಂಡರ್ ಪ್ರಯೋಜನವನ್ನು ತಕ್ಷಣ ಕಲ್ಪಿಸುವಂತೆ ಫೆಟೋ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ. ಗಂಗಾಧರ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸರ್ಕಾರಿ ನೌಕರರನ್ನು ವಂಚಿಸುತ್ತಾ ಬಂದಿರುವ ಎಡರಂಗ ಸರ್ಕಾರ ಮತ್ತೆ, ನಾಲ್ಕು ವರ್ಷಗಳ ನಂತರ ಈ ಪ್ರಯೋಜನ ಲಭ್ಯವಾಗಿಸುವ ರೀತಿಯಲ್ಲಿ ಆದೇಶ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ತಾಳ್ಮೆ ಪರೀಕ್ಷೆ ನಡೆಸುತ್ತಿದೆ. ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಿ, ತಕ್ಷಣ ಲೀವ್ಸರಂಡರ್ ಯೋಜನೆ ಜಾರಿಗೊಳಿಸುವಂತೆ ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರಿ ನೌಕರರಿಗೆ ತಡೆಹಿಡಿಯಲಾಗಿರುವ ಲೀವ್ ಸರಂಡರ್ ಸೌಲಭ್ಯವನ್ನು ನಾಲ್ಕು ವರ್ಷಗಳ ನಂತರ ಹೊಸದಾಗಿ ಅಧಿಕಾರಕ್ಕೆ ಬರುವ ಸರ್ಕಾರ ನೀಡಲಿದೆ ಎಂಬ ವಿಶಿಷ್ಟ ಆದೇಶ ಹೊರಡಿಸಿರುವ ಆದೇಶದ ವಿರುದ್ಧ ಎನ್ಜಿಒ ಸಂಘ್ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ರಂಜಿತ್ ಕೆ, ರಾಜ್ಯ ಉಪಾಧ್ಯಕ್ಷ ಪಿ ಪೀತಾಂಬರನ್, ರಾಜ್ಯ ಸಮಿತಿ ಸದಸ್ಯ ರಾಜನ್ ಕೆ, ಜಿಲ್ಲಾ ಕಾರ್ಯದರ್ಶಿ ಶ್ಯಾಮ್ ಪ್ರಸಾದ್, ಶಿವ ನಾಯ್ಕ್, ರವೀಂದ್ರನ್ ಕೋಟೋಡಿ, ಸಂತೋಷನ್ ವಿ.ಕೆ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಲೀವ್ಸರಂಡರ್ ಸೌಲಭ್ಯ ತಕ್ಷಣ ಒದಗಿಸುವಂತೆ ಆಗ್ರಹಿಸಿ ಎನ್.ಜಿ.ಓ ಸಂಘ್ ಪ್ರತಿಭಟನೆ
0
January 04, 2023
Tags