ಕಾಸರಗೋಡು: 2002ರ ಗುಜರಾತ್ ಕಲಾಪದ ಬಗ್ಗೆ ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇರಳದ ಎಡರಂಗ ಬೆಂಬಲಿತ ಸಂಘಟನೆಗಳು ಪೈಪೋಟಿ ನಡೆಸುತ್ತಿರುವ ಮಧ್ಯೆ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ನೊಳಗೆ ಪ್ರದರ್ಶನಕ್ಕೆ ವಿವಿ ಉಪಕುಲಪತಿ ಅನುಮತಿ ನಿರಾಕರಿಸಿದ್ದು, ಆದೇಶ ಮೀರಿ ಸಾಕ್ಷ್ಯಚಿತ್ರ ಪ್ರದರ್ಶಿಸಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಬಿಸಿ ತಯಾರಿಸಿದ 'ಇಂಡಿಯಾ ಮೋದಿ ಕ್ವೆಶ್ಚನ್'ಎಂಬ ಸಾಕ್ಷ್ಯಚಿತ್ರವನ್ನು ವಿಶ್ವ ವಿದ್ಯಾಲಯದೊಳಗೆ ಪ್ರದರ್ಶಿಸಲು ಅವಕಾಶ ಕಲ್ಪಿಸುವಂತೆ ವಿಶ್ವ ವಿದ್ಯಾಲಯದ ಎಸ್ಎಫ್ಐ ಘಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಸ್ಟೂಡೆಂಟ್ ವೆಲ್ಫೇರ್ಗೆ ಇ-ಮೇಲ್ ಕಳುಹಿಸುವ ಮೂಲಕ ಅನುಮತಿ ಕೇಳಿತ್ತು. ಇದಕ್ಕೆ ಉತ್ತರ ಲಭಿಸದ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯ ಕ್ಯಾಂಪಸ್ ಹೊರಭಾಗದಲ್ಲಿ ಪ್ರದರ್ಶನ ನಡೆಸುವುದಾಗಿ ತಿಳಿಸಿದೆ.
ಕ್ಯಾಂಪಸ್ ಒಳಭಾಗದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸುತ್ತಿಲ್ಲ ಎಂಬ ಬಗ್ಗೆ ವಿವಿಯ ಸೆಕ್ಯೂರಿಟಿ ಅಧಿಕಾರಿ ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿರುವುದಾಗಿ ಉಪಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್ ಒಳಗೆ ಸಾಕ್ಷ್ಯಚಿತ್ರ ಪ್ರದರ್ಶಿಸುವುದರಿಂದ ಎಸೆಫ್ಐ ಹಿಂದೆ ಸರಿದಿತ್ತು. ಕ್ಯಾಂಪಸ್ ಒಳಗೆ ಸಾಕ್ಷ್ಯಚಿತ್ರ ಪ್ರದರ್ಶಿಸುವುದಾಗಿ ಎಸ್ಎಫ್ಐ ಪ್ರಕಟಿಸುತ್ತಿದ್ದಂತೆ ಬಿಜೆಪಿ-ಯುವಮೋರ್ಚಾ ಇದರ ವಿರುದ್ಧ ರಂಗಕ್ಕಿಳಿದಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯ ಸನಿಹದ ಪೆರಿಯ ಪೇಟೆಯಲ್ಲಿ ಪೊಲೀಸರು ಮುಂಜಾಗ್ರತಾಕ್ರಮ ಕೈಗೊಂಡಿದ್ದಾರೆ.
ಕೇರಳದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಎಸ್ಎಫ್ಐ-ಡಿವೈಎಫ್ಐ ನೇತೃತ್ವದಲ್ಲಿ ಈಗಾಗಲೇ 'ಇಂಡಿಯಾ ಮೋದಿ ಕ್ವೆಶ್ಚನ್'ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಇದರ ವಿರುದ್ಧ ಬಿಜೆಪಿ-ಯುವಮೋರ್ಚಾದ ಪ್ರತಿಭಟನೆಯೂ ಮುಂದುವರಿದಿದ್ದು, ವಿವಿಧೆಡೆ ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಲಾಗಿದೆ.
ಕ್ಯಾಂಪಸ್ನೊಳಗೆ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರದರ್ಶಿಸದಂತೆ ಪೆರಿಯ ವಿವಿ ಉಪಕುಲಪತಿ ತಡೆ
0
January 25, 2023