ಕಾಸರಗೋಡು: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕೇರಳ ಕೌನ್ಸಿಲ್ ಫಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಎನ್ವಿರಾನ್ಮೆಂಟ್ (ಕೆಎಸ್ಸಿಎಸ್ಟಿಇ)ವತಿಯಿಂದ 'ಸೈನ್ಸ್ ಆನ್ ವೀಲ್ಸ್'ಎಂಬ ಹೆಸರಿನ ಸಂಚಾರಿ ವಿಜ್ಞಾನ ಪ್ರದರ್ಶನ ಸೋಮವಾರದಿಂದ ಆರಂಭಗೊಂಡಿದೆ.
ರಾಜ್ಯಮಟ್ಟದ ಉದ್ಘಾಟನಾ ಸಮಾರಂಭ ಕಾಸರಗೋಡು ಜಿಲ್ಲೆಯ ಬಳಾಂತೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಮಚಾರಿ ವಿಜ್ಞಾನ ಮೇಳವನ್ನು ಉದ್ಘಾಟಿಸಿದರು. ಶಾಲಾ ಮಕ್ಕಳಲ್ಲಿ ವಿವಿಧ ವಿಜ್ಞಾನ ಪ್ರಯೋಗಗಳ ಮೂಲಕ ವೈಜ್ಞಾನಿಕ ಅಭಿರುಚಿ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇರಳದ ಎಲ್ಲಾ ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಎರಡು ದಿನಗಳ ಕಾಲ ಸೈನ್ಸ್ ಆನ್ ವೀಲ್ಸ್ ವಾಹನದಲ್ಲಿ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಈ ಸಂದರ್ಭ ವಿಜ್ಞಾನ ಪರಿಕಲ್ಪನೆಗಳಲ್ಲಿ ಆತಿಥ್ಯ ವಹಿಸುವ ಶಾಲೆಯ ಆಯ್ಕೆಯಾದ ತರಬೇತಿ ಪಡೆದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪರಿಕಲ್ಪನೆಗಳನ್ನು ವಿವರಿಸಿಕೊಡಲಿದ್ದಾರೆ. ಈ ಮೂಲಕ ಮಕ್ಕಳ ಸಂವಹನ ಕೌಶಲ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಆಯ್ದ ಶಾಲೆಗಳು ಮತ್ತು ಹತ್ತಿರದ ಇತರ ಶಾಲೆಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹೆತ್ತವರು ಸೈನ್ಸ್ ಆನ್ ವೀಲ್ಸ್ ಅನ್ನು ಸಹ ಭೇಟಿ ಮಾಡಬಹುದಾಗಿದೆ. ಪ್ರದರ್ಶನವು ಬೆಳಿಗ್ಗೆ 10 ರಿಂದ ಸಂಜೆ 4.30ರ ವರೆಗೆ ಇರಲಿದೆ. ಸಯನ್ಸ್ ಆನ್ ವೀಲ್ ವಾಹನ ಮಾರ್ಚ್ 2 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.
ಕೇರಳ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪೆÇ್ರ.ಕೆ.ಪಿ.ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಉಪಾಧ್ಯಕ್ಷ ಪಿ.ಎಂ ಕುರ್ಯಕೋಸ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಪುಷ್ಪಕುಮಾರಿ, ಸದಸ್ಯ ಅರುಣ್ ರಂಗತ್ತುಮಲ, ಕೃಷಿ ಮಹಾವಿದ್ಯಾಲಯದ ಡೀನ್ ಪಿ.ಕೆ.ಮಿನಿ, ಪಿ.ಟಿ.ಎ ಅಧ್ಯಕ್ಷ ಕೆ.ಎನ್.ವೇಣು, ಎಂ.ಸಿ.ಮಾಧವನ್ ಉಪಸ್ಥಿತರಿದ್ದರು. ಬಳಂತೋಡು ಶಾಲಾ ಮುಖ್ಯೋಪಾಧ್ಯಾಯ ಎಂ. ಗೋವಿಂದನ್ ಸ್ವಾಗತಿಸಿದರು. ತಾಂತ್ರಿಕ ಪರಿಸರ ಪರಿಷತ್ತಿನ ವಿಜ್ಞಾನಿ ಡಾ.ನೀತು ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಎಚ್ಎಂಸಿಕೆ ರಮೇಶ ವಂದಿಸಿದರು.