ಕೋಝಿಕ್ಕೋಡ್:ರಾಜ್ಯಮಟ್ಟದ ಶಾಲಾ ಕಲೋತ್ಸವದ ಯಕ್ಷಗಾನ ವೇದಿಯಲ್ಲಿ ಚೌಕಿ ಪೂಜೆಗೆ ಸಂಘಟಕರು ತಡೆ ನೀಡಿದ ಘಟನೆ ನಡೆದಿದ್ದು ಭಾರೀ ಪ್ರತಿರೋಧ ವ್ಯಕ್ತವಾಗಿದೆ.
ಸಂಘಟನಾ ಸಮಿತಿಯ ಪದಾಧಿಕಾರಿಗಳು ಬಂದು ಬಲವಂತವಾಗಿ ದೀಪವನ್ನು ನಂದಿಸಿದರು. ಚೌಕಿ ಪೂಜೆ ಎಂದರೆ ಎಲ್ಲಾ ಕಲಾವಿದರು ಬಣ್ಣಹಚ್ಚಿದ ಬಳಿಕ ರಂಗವೇರುವ ಮೊದಲು ಗಣೇಶನ ಅನುಮತಿಯನ್ನು ಪಡೆಯುವ ಸಮಾರಂಭವಾಗಿದೆ. ಹೀಗಿರುವಾಗ ಸಂಘಟನಾ ಸಮಿತಿಯ ಸದಸ್ಯರು ಚೌಕಿಗೆ ನುಗ್ಗಿ ಗಣೇಶನ ಮುಂದೆ ಹಚ್ಚಿದ್ದ ದೀಪವನ್ನು ನಂದಿಸಿ ಅವಮಾನ ಮಾಡಿರುವುದು ತೀವ್ರ ಆಕ್ಷೇಪಣೆಗೆ ಕಾರಣವಾಗಿದೆ.
ಕೋಯಿಕ್ಕೋಡ್, ವಯನಾಡು, ಕಾಸರಗೋಡು ಜಿಲ್ಲೆಗಳ ಯಕ್ಷಗಾನ ತಂಡಗಳ ಚೌಕಿ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಸಂಗೀತ ವಾದ್ಯಗಳನ್ನು ಬಳಸಲಾಗಿದೆ ಎಂದು ಸಂಘಟನಾ ಸಮಿತಿ ಆರೋಪಿಸಿದೆ. ಆದರೆ ಆಗ ಚೌಕಿ ಪಕ್ಕದ ವೇದಿಕೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ತಮ್ಮ 22 ವರ್ಷಗಳ ಕಲಾ ಜೀವನದಲ್ಲಿ ಇಂತಹ ಅನುಭವ ಇದೇ ಮೊದಲು ಎಂದು ಯಕ್ಷಗಾನ ಗುರು ಮಾಧವ ನೆಟ್ಟಣಿಗೆ ಹೇಳಿರುವÀರು. ಸಂಘಟನಾ ಸಮಿತಿಯಿಂದ ಬಹಿರಂಗ ಕ್ಷಮೆಯಾಚಿಸದೆ ವೇದಿಕೆ ಏರುವುದಿಲ್ಲ ಎಂದು ಪ್ರತಿಭಟಿಸಿದರು. ‘ನಾವು ಅವರನ್ನು ಕ್ಷಮಿಸಿದರೂ ದೇವರು ಬಿಡುವುದಿಲ್ಲ’ ಎಂದು ಗುರು ಮಾಧವ ನೆಟ್ಟಣಿಗೆ ಕಲಾಪಮಾನಕ್ಕೆ ದುಃಖದಿಂದ ಪ್ರತಿಕ್ರಿಯಿಸಿದ್ದಾರೆ.
ಪೋಲೀಸರಿಗೆ ದೂರು ನೀಡಲಾಯಿತು. ಮಾಧ್ಯಮದವರನ್ನು ತಡೆಹಿಡಿಯಲಾಗಿತ್ತು. ಚಿತ್ರೀಕರಣಕ್ಕೆ ಅವಕಾಶ ನೀಡಿರಲಿಲ್ಲ. ಸ್ಥಳದಲ್ಲಿ ಇಬ್ಬರು ಪೋಲೀಸರು ಕಾವಲಿಗೆ ನೇಮಿಸಲಾಗಿದೆ. ಕೊನೆಗೆ ಪೋಲೀಸರು ಕಲಾವಿದರ ಮನವೊಲಿಸಿದ ಬಳಿಕ ವೇದಿಕೆಯಲ್ಲಿ ಪ್ರದರ್ಶನ ನಡೆಸಲಾಯಿತು.
ರಾಜ್ಯ ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಅವಮಾನ: 'ಚೌಕಿ ಪೂಜೆ'ಗೆ ಆಯೋಜನಾ ಸಮಿತಿಯಿಂದ ತಡೆ
0
January 05, 2023
Tags