ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವಯಾಪ್ತಿಯ ಕುಂಡಂಗುಳಿ ನೀರ್ಕಯ ಎಂಬಲ್ಲಿ ತಾಯಿ ಮತ್ತು ಪುತ್ರಿಯ ಮ್ರತದೇಹ ನಿಗೂಢ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದೆ. ನೀರ್ಕಯ ನಿವಾಸಿ, ಬಸ್ ಚಾಲಕ ಚಂದ್ರನ್ ಎಂಬವರ ಪತ್ನಿ ನಾರಾಯಣಿ(45)ಹಾಗೂ ಇವರ ಪುತ್ರಿ ಶ್ರೀನಂದ(12)ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರು.
ನಾರಾಯಣಿ ಅವರು ಅಡುಗೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಶ್ರೀನಂದ ಅವರ ಮೃತದೇಹ ಇನ್ನೊಂದು ಕೊಠಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆರೆಮನೆಯವರು ನಾರಾಯಣಿ ಅವರಿಗೆ ಹಲವು ಬಾರಿ ಮೊಬೈಲ್ ಕರೆಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಸಂಜೆಯಾದರೂ ತಾಯಿ ಮತ್ತು ಪುತ್ರಿ ಮನೆಯಿಂದ ಹೊರಗೆ ಬಾರದಿರುವುದರಿಂದ ಸಂಶಯಗೊಂಡು ನೆರೆಮನೆಯವರು ನೋಡಿದಾಗ ನಿಗೂಢವಾಗಿ ಮೃತದೇಹ ಕಂಡುಬಂದಿತ್ತು. ಬೇಡಡ್ಕ ಠಾಣೆ ಪೊಲೀಸರ ಉಪಸ್ಥಿತಿಯಲ್ಲಿ ಮೃತದೇಹ ಆಸ್ಪತ್ರೆಗೆ ಸಾಗಿಸಲಾಗಿದೆ.
ನಾರಾಯಣಿ ಅವರು ಬೀಡಿ ಕಾರ್ಮಿಕೆಯಾಗಿದ್ದು, ಶ್ರೀನಂದಾ ಕುಮಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ನಾರಾಯಣಿ ಅವರ ಪತಿ ಚಂದ್ರನ್ ಟೂರಿಸ್ಟ್ ಬಸ್ ಚಾಲಕರಾಗಿದ್ದು, ಊಟಿ ಪ್ರವಾಸದಲ್ಲಿದ್ದಾರೆ. ತಾಯಿ, ಪುತ್ರಿ ಸಾವಿನ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಕುಂಡಂಗುಳಿಯಲ್ಲಿ ಮನೆಯೊಳಗೆ ತಾಯಿ, ಪುತ್ರಿ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆ
0
January 23, 2023