ಕಾಸರಗೋಡು: ಕೃಷಿಗೆ ಸಂಬಂಧಿಸಿ ಸಿಪಿಸಿಅರ್ಐ ನಡೆಸುವ ವೈಜ್ಞಾನಿಕ ಸಂಶೋಧನೆಗಳನ್ನು ತಳಮಟ್ಟದ ಕೃಷಿಕರಿಗೂ ತಲುಪಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಸಿಆರ್ಐ ನೂತನ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬರ್(ಕೆ,ಬಿ ಹೆಬ್ಬಾರ್)ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್ಕ್ಲಬ್ ವತಿಯಿಂದ ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಕೆ ಧಾರಣೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಡಕೆ ಕೃಷಿಯೂ ವ್ಯಾಪಕಗೊಳ್ಳಲು ಕಾರಣವಾಗುತ್ತಿದೆ. ಮುಂದೊಂದು ದಿನ ಹವಾಮಾನ ವೈಪರೀತ್ಯದ ಪರಿಣಾಮ ಅಡಕೆ ಕೃಷಿಗೆ ವ್ಯತಿರಿಕ್ತವಾದಲ್ಲಿ ಕೃಷಿಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಅಡಕೆಯ ಉಪಯೋಗವನ್ನು ಮತ್ತಷ್ಟು ವ್ಯಾಪಕಗೊಳಿಸುವ ಬಗ್ಗೆಯೂ ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ. ತೆಂಗಿನ ಕೃಷಿಯನ್ನು ಬಾಧಿಸುವ ಬಿಳಿ ಕೀಟಬಾಧೆ ಗಣನೀಯವಾಗಿ ಕಡಿಮೆಯಾಗಿದೆ. ಅಡಕೆಗೆ ಬಾಧಿಸುತ್ತಿರುವ ಹಳದಿ ಎಲೆ ರೋಗ, ಹಿಂಗಾರ ಕರಟುವಿಕೆ ಮುಂತಾದ ರೋಗಗಳ ಹಾಗೂ ಇವುಗಳ ನಿಯಂತ್ರಣ ಕ್ರಮದ ಬಗ್ಗೆ ಕೃಷಿಕರಿಗೆ ಸಿಪಿಸಿಆರ್ಐ ವತಿಯಿಂದ ಕಾಲಾಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಡಕೆಯ ಎಲೆಚುಕ್ಕಿ ರೋಗದ ವೈರಸ್ಗೆ ಪ್ರಕೃತಿಯಲ್ಲೇ ಎದುರುಕೀಟಾಣುಗಳು ಹುಟ್ಟಿಕೊಂಡು, ಕ್ರಮೇಣ ವೈರಸ್ಗಳು ಶಕ್ತಿಕಳೆದುಕೊಳ್ಳಲಿದೆ ಎಂದು ತಿಳಿಸಿದರು.
ಕೇರಳದ ಪ್ರತಿ ಪಂಚಾಯಿತಿಯಲ್ಲಿ ಕೃಷಿಭವನ ಸಕ್ರಿಯವಾಗಿರುವುದು ದೇಶಕ್ಕೆ ಮಾದರಿಯಾಗಿದೆ. ಕೃಷಿಭವನದ ಮೂಲಕವೂ ಕೃಷಿಕರಿಗೆ ಅಗತ್ಯ ಮಾಹಿತಿಯನ್ನು ಸಿಪಿಸಿಆರ್ಐ ಮೂಲಕ ನೀಡಲಾಗುತ್ತಿದೆ. ಪ್ರಮುಖವಗಿ ಅಡಕೆ, ತೆಂಗು, ಕೊಕ್ಕೋ ಬೆಳಗಳ ಬಗ್ಗೆ ಮತ್ತಷ್ಟು ಅಧ್ಯಯನ, ಸಂಶೋಧನೆಗೆ ಸಿಪಿಸಿಆರ್ಐ ಆದ್ಯತೆ ನೀಡಲಿರುವುದಾಗಿ ತಿಳಿಸಿದರು.
ಡೈರಿ ಬಿಡುಗಡೆ:
ಕಾಸರಗೋಡು ಪ್ರೆಸ್ಕ್ಲಬ್ ಹೊರತಂದಿರುವ 2023ನೇ ಸಾಲಿನ ನೂತನ ಡೈರಿಯನ್ನು ಸಿಪಿಸಿಆರ್ಐ ನೂತನ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಬಿಡುಗಡೆಗೊಳಿಸಿದರು. ಸಿಪಿಸಿಆರ್ಐ ವಿಜ್ಞಾನಿ ಡಾ. ಸಿ. ತಂಬಾನ್, ಶ್ಯಾಂ ಪ್ರಸಾದ್ ಕುಂಚಿನಡ್ಕ, ಪ್ರೆಸ್ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಉಪಾಧ್ಯಕ್ಷ ನಹಾಸ್, ಜತೆಕಾರ್ಯದರ್ಶಿ ಪ್ರದಿಪ್ನಾರಯಣ್ ಉಪಸ್ಥಿತರಿದ್ದರು.
ಸಿಪಿಸಿಆರ್ಐ ಸಂಶೋಧನೆ ತಳಮಟ್ಟದ ಕೃಷಿಕರಿಗೂ ತಲುಪಿಸಲು ಅಗತ್ಯ ಕ್ರಮ-ಸಿಪಿಸಿಆರ್ಐ ನೂತನ ನಿದೇಸಕ ಡಾ. ಕೆ. ಬಾಲಚಂದ್ರ ಹೆಬ್ಬಾರ್
0
January 24, 2023