HEALTH TIPS

ಸಂವಿಧಾನದ ಮೂಲ ರಚನಾ ಸಿದ್ಧಾಂತ ಧ್ರುವತಾರೆಯಂತೆ ಮಾರ್ಗದರ್ಶನ ನೀಡುತ್ತದೆ: ಸಿಜೆಐ ಡಿ.ವೈ.ಚಂದ್ರಚೂಡ್

            ವದೆಹಲಿ:ನ್ಯಾಯಾಂಗ ಮತ್ತು ಕಾರ್ಯಾಂಗದ ಅಧಿಕಾರಗಳನ್ನು ಪ್ರತ್ಯೇಕಿಸುವ ಸಂವಿಧಾನದ ಮೂಲ ರಚನಾ ಸಿದ್ಧಾಂತವು ಧ್ರುವತಾರೆಯಂತೆ ಮಾರ್ಗದರ್ಶನವನ್ನು ನೀಡುತ್ತದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ (CJI) ಡಿ.ವೈ.ಚಂದ್ರಚೂಡ್(D.Y. Chandrachud) ಅವರು ಹೇಳಿದ್ದಾರೆ.

           ‌1973ರಲ್ಲಿ ಕೇಶವಾನಂದ ಭಾರತಿ ವಿರುದ್ಧ ಕೇರಳ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪನ್ನು ಉಪರಾಷ್ಟ್ರಪತಿ ಜಗದೀಪ ಧನಕರ್(Jagdeep Dhankhar) ಅವರು ಇತ್ತೀಚಿಗೆ ಟೀಕಿಸಿದ್ದರು. ಸಂವಿಧಾನವನ್ನು ತಿದ್ದುಪಡಿಗೊಳಿಸಲು ಸಂಸತ್ತಿಗೆ ಅಧಿಕಾರವಿದೆ,ಆದರೆ ಅದರ ಮೂಲ ರಚನೆಯನ್ನು ಅದು ಬದಲಿಸುವಂತಿಲ್ಲ ಎಂದು 13 ನ್ಯಾಯಾಧೀಶರ ಪೀಠವು 7:6 ಬಹುಮತದೊಂದಿಗೆ ತೀರ್ಪು ನೀಡಿತ್ತು. ಸಿಜಿಐ ಹೇಳಿಕೆ ಧನಕರ್ ಟೀಕೆಗೆ ಪರೋಕ್ಷ ಪ್ರತಿಕ್ರಿಯೆಯಾಗಿರುವಂತಿದೆ.

               ಜ.11ರಂದು ಜೈಪುರದಲ್ಲಿ 83ನೇ ಅಖಿಲ ಭಾರತ ಸ್ಪೀಕರ್ ಗಳ ಸಮಾವೇಶದಲ್ಲಿ ಮಾತನಾಡಿದ ಸಂದರ್ಭ,ಸಂವಿಧಾನಕ್ಕೆ ತಿದ್ದುಪಡಿಯನ್ನು ತರುವ ಸಂಸತ್ತಿನ ಅಧಿಕಾರ ಇತರ ಯಾವುದೇ ಸಂಸ್ಥೆಯನ್ನು ಅವಲಂಬಿಸಬಹುದೇ? ಇದಕ್ಕೆ ತನ್ನ ಒಪ್ಪಿಗೆ ಬೇಕು ಎಂದು ಯಾವುದೇ ಸಂಘಟನೆ ಅಥವಾ ಸಂಸ್ಥೆಯು ಹೇಳಬಹುದೇ ಎಂದು ಧನಕರ್ ಪ್ರಶ್ನಿಸಿದ್ದರು. 2014ರಲ್ಲಿ ಕೊಲಿಜಿಯಂ ವ್ಯವಸ್ಥೆಗೆ ಬದಲಾಗಿ ಸರಕಾರವು ಪ್ರಸ್ತಾವಿಸಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆಯನ್ನು ರದ್ದುಗೊಳಿಸುವ ಸರ್ವೋಚ್ಚ ನ್ಯಾಯಾಲಯದ ನಿರ್ಧಾರದಂತಹ ಇನ್ನೊಂದು ನಿದರ್ಶನ ವಿಶ್ವದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿಲ್ಲ ಎಂದೂ ಅವರು ಹೇಳಿದ್ದರು.

                 ಶನಿವಾರ ಮುಂಬೈನಲ್ಲಿ ಬಾಂಬೆ ವಕೀಲರ ಸಂಘವು ಆಯೋಜಿಸಿದ್ದ 18ನೇ ನಾನಿ ಪಾಲ್ಕಿವಾಲಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನ್ಯಾ.ಚಂದ್ರಚೂಡ್,ಸಂವಿಧಾನದ ಮೂಲ ರಚನಾ ಸಿದ್ಧಾಂತಕ್ಕಾಗಿ ಪಾಲ್ಕಿವಾಲಾರಿಗೆ ಹೆಗ್ಗಳಿಕೆಯನ್ನು ನೀಡಿದರು. ಕೇಶವಾನಂದ ಭಾರತಿಯವರನ್ನು ಪ್ರತಿನಿಧಿಸಿದ್ದ ಪಾಲ್ಕಿವಾಲಾ ಕೇರಳದಲ್ಲಿಯ 1969ರ ಭೂಸುಧಾರಣೆಗಳನ್ನು ಪ್ರಶ್ನಿಸಿದ್ದರು.

                ಸಂವಿಧಾನದ ಮೂಲ ರಚನೆಯು ಸಂವಿಧಾನದ ವ್ಯಾಖ್ಯಾನಕಾರರಿಗೆ ಮತ್ತು ಅದರ ಅನುಷ್ಠಾನಕಾರರಿಗೆ ಮಾರ್ಗದರ್ಶನವನ್ನು ನೀಡುತ್ತದೆ,ಜೊತೆಗೆ ಹಾದಿ ಕಗ್ಗಂಟಾದಾಗ ನ್ಯಾಯಾಧೀಶರಿಗೆ ನಿರ್ದಿಷ್ಟ ದಿಕ್ಕನ್ನು ತೋರಿಸುತ್ತದೆ ಎಂದು ಹೇಳಿದ ನ್ಯಾ.ಚಂದ್ರಚೂಡ್,'ನಮ್ಮ ಸಂವಿಧಾನದ ಮೂಲ ರಚನೆ ಅಥವಾ ತತ್ತ್ವವು ಸಂವಿಧಾನದ ಪಾರಮ್ಯ, ಕಾನೂನಿನ ಆಡಳಿತ,ಅಧಿಕಾರಗಳ ವಿಂಗಡಣೆ,ನ್ಯಾಯಾಂಗ ವಿಮರ್ಶೆ,ಜಾತ್ಯತೀತತೆ,ಒಕ್ಕೂಟವಾದ, ವ್ಯಕ್ತಿಯ ಸ್ವಾತಂತ್ರ ಮತ್ತು ಘನತೆ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ಆಧಾರಿತವಾಗಿದೆ ಎಂದರು.

                ನ್ಯಾಯಾಧೀಶರ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ನ್ಯಾಯಾಂಗದ ನಡುವಿನ ಬಿಕ್ಕಟ್ಟಿನ ನಡುವೆಯೇ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗಳು ಹೊರಬಿದ್ದಿವೆ.

             ಈಗಿನ ಕೊಲಿಜಿಯಂ ವ್ಯವಸ್ಥೆಯ ಬದಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆಯನ್ನು ತರಬೇಕು ಎಂದು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರು ಹಲವಾರು ಸಂದರ್ಭಗಳಲ್ಲಿ ಪ್ರತಿಪಾದಿಸಿದ್ದಾರೆ. ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಸತ್ತು ಅಂಗೀಕರಿಸಿದ್ದ ಈ ಕಾಯ್ದೆಯನ್ನು 2015ರಲ್ಲಿ ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಅದು ಅಸಾಂವಿಧಾನಿಕವಾಗಿದೆ ಎಂದು ಪರಿಗಣಿಸಿತ್ತು.

                ಈ ನಡುವೆ ಬಿಕ್ಕಟ್ಟು ಮುಂದುವರಿದಿರುವ ಕಾರಣ ನ್ಯಾಯಾಂಗ ನೇಮಕಾತಿಗಳಿಗಾಗಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಮಾಡಿರುವ ಹಲವಾರು ಶಿಫಾರಸುಗಳು ಕೇಂದ್ರದ ಬಳಿ ಬಾಕಿಯಾಗಿವೆ.


             


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries