ತಿರುವನಂತಪುರಂ: ಹೊಸ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆಗೋಡೆಗೆ ಗುದ್ದಿ ಬಹು ಭಾಗ ಜಖಂಗೊಂಡ ಭೀಕರ ಘಟನೆ ಕೇರಳದ ಅಕುಲಂ ಸೇತುವೆಯಲ್ಲಿ ನಡೆದಿದ್ದು, ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಬಿಹಾರದ ಮೂಲಕ ಚಾಲಕ ಮುಹಮ್ಮದ್ ನಿಸಾರ್ ಖಾನ್ (37) ಸಣ್ಣ ಪುಟ್ಟ ಗಾಯಗಳಿಂದ ಬದುಕುಳಿದಿದ್ದು, ಅಕುಲಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಕಜಕೂಟಂ ಕಡೆಯಿಂದ ಬಂದ ಲಾರಿ ಅಪಘಾತಕ್ಕೀಡಾಗಿದೆ. ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯಿಂದ ಹೊರಕ್ಕೆ ಎಸೆಯಲ್ಪಟ್ಟ ಚಾಲಕ ನಿಸಾರ್, ಹುಲ್ಲು ಮತ್ತು ಗಿಡಗಳು ತುಂಬಿದ್ದ ಕೆರೆಯ ಆಳವಿಲ್ಲದ ಭಾಗಕ್ಕೆ ಬಿದ್ದಿದ್ದಾರೆ. ಪರಿಣಾಮವಾಗಿ, ಅವರು ಕೆರೆಯಲ್ಲಿ ಮುಳುಗದೇ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆಯ ಬೆನ್ನಲ್ಲೇ ದಾರಿಹೋಕರು ಅಪಘಾತದ ಬಗ್ಗೆ ಹತ್ತಿರದ ಹೆದ್ದಾರಿ ಗಸ್ತು ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಗಸ್ತು ತಂಡ ರಕ್ಷಣಾ ಕಾರ್ಯಾಚರಣೆ ನಡೆಸುವ ಮೊದಲು ತುಂಬೆ ಪೊಲೀಸರು ಮತ್ತು ಕಜಕೂಟಂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ನಾಗಾಲ್ಯಾಂಡ್ ನೋಂದಣಿಯ ಲಾರಿಯು ಕರ್ನಾಟಕದಿಂದ ಚಕ್ಕೈ ಬಳಿಯ ಜನಪ್ರಿಯ ಮಾರುತಿ ಶೋರೂಮ್ಗೆ ಕಾರುಗಳನ್ನು ಹೊತ್ತೊಯ್ಯುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಚಾಲಕ ನಿದ್ದೆಗೆ ಜಾರಿದ ಪರಿಣಾಮ ಅಫಘಾತ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು ಹತ್ತು ಗಂಟೆಗಳ ಕಾಲ ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕ್ರೇನ್ ಬಳಸಿ ಲಾರಿಯನ್ನು ಹೊರ ತೆಗೆದ ಬಳಿಕ ಆ ಮಾರ್ಗದಲ್ಲಿ ಸಂಚಾರ ಯಥಾಸ್ಥಿತಿಗೆ ಮರಳಿತು. ಇದಕ್ಕು ಮೊದಲು ಲಾರಿಯಲ್ಲಿದ್ದ ಕಾರುಗಳನ್ನು ಶೋರೂಂಗೆ ಸ್ಥಳಾಂತರಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ, ಅಕ್ಕುಲಂ ಸೇತುವೆಗೆ ಮಾತ್ರ ಅಳವಡಿಸಿಲ್ಲ. ಸಂಜೆ 6ರ ನಂತರ ಇಡೀ ಸೇತುವೆ ಕತ್ತಲಾಗಲಿದೆ. ಇದರಿಂದಾಗಿ ಇಲ್ಲಿ ಅಪಘಾತಗಳು ಸಾಮಾನ್ಯ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.