ಕಾಸರಗೋಡು: ಪನತ್ತಡಿ ಗ್ರಾಮಪಂಚಾಯತಿಯ ಕುಟುಂಬಶ್ರೀ ಹಾಳೆತಟ್ಟೆಗಳಿಂದ ಸೃಷ್ಟಿಸಿದ ಯಶೋಗಾಥೆ ಗಮನ ಸೆಳೆದಿದೆ.
ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸರ ಸ್ನೇಹೀ ಸ್ವ-ಉದ್ಯೋಗ ಉದ್ಯಮವು ಪನತ್ತಡಿ ಗ್ರಾಮಪಂಚಾಯತಿ 6ನೇ ವಾರ್ಡ್ನ ಸ್ಪೂರ್ತಿ ಹಾಳೆತಟ್ಟೆ ನಿರ್ಮಾಣ ಘಟಕ ಸಾಧನಾಶೀಲ ತಂಡವಾಗಿದೆ. ಗ್ರಾಮೀಣ ವಲಯದ ಮಹಿಳೆಯರಿಗೆ ಸ್ವ-ಉದ್ಯೋಗವನ್ನು ನೀಡುವುದಕ್ಕಾಗಿ ಪರಪ್ಪ ಬ್ಲಾಕ್ ಪಂಚಾಯತಿ ವಾರ್ಷಿಕ ಯೋಜನೆಯಲ್ಲಿ ತೊಡಗಿಸಿಕೊಂಡು ತೊಡಗಿಕೊಂಡ ಈ ಉದ್ಯಮವು ಕನಿಷ್ಠ ಅವಧಿಯಿಂದಲೇ ಲಾಭದಾಯಕವಾಗಿದೆ. ಕರ್ನಾಟಕದ ಸುಳ್ಯ ಸಹಿತ ವಿವಿಧ ಸ್ಥಳಗಳಿಗೆ ಈ ಮಹಿಳಾ ಉದ್ಯಮಿಗಳ ಹಾಳೆತಟ್ಟೆ ವಿತರಣೆಗೊಳ್ಳುತ್ತಿದೆ. ತಿಂಗಳಲ್ಲಿ 60 ಸಾವಿರ ರೂ.ಗಳÀಷ್ಟು ಮಾರಾಟಗೊಂಡು ಯಶಸ್ವಿಯಾಗುತ್ತಿದೆ ಸ್ಪೂರ್ತಿ ಹಾಳೆತಟ್ಟೆ ನಿರ್ಮಾಣ ಘಟಕ.
ಕರ್ನಾಟಕ ಗಡಿ ಪ್ರದೇಶವಾದ ಕಲ್ಲಪಳ್ಳಿಯ ಐವರು ಮಹಿಳೆಯರು ಸೇರಿಕೊಂಡು ಈ ಘಟಕವನ್ನು ಪ್ರಾರಂಭಿಸಿದರು. ದಿನಕ್ಕೆ ಸಾವಿರಕ್ಕಿಂತ ಹೆಚ್ಚು ಹಾಳೆತಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ವಿವಿಧ ಪ್ರದೇಶಗಳಿಗೆ ವಿತರಿಸಲಾಗುತ್ತದೆ. ಬೆಳಿಗ್ಗೆ 8 ರಿಂದ ಪ್ರಾರಂಭಗೊಂಡು ರಾತ್ರಿಯವರೆಗೂ ಅರ್ಪಣ ಮನೋಭಾವದಿಂದ ನಡೆಯುತ್ತಿರುವ ಈ ಕೈಂಕರ್ಯ ಈ ವಿಜಯದ ಹಿಂದಿದೆ. ಪನತ್ತಡಿ ಪಂಚಾಯತಿಯ ಕಲ್ಲಪಳ್ಳಿ ಮತ್ತು ಸುತ್ತಮುತ್ತಲಿನ ತೋಟಗಳಿಂದ ಘಟಕಕ್ಕೆ ಅಗತ್ಯವಿರುವ ಹಾಳೆಗಳನ್ನು ಸಂಗ್ರಹಿಸಲಾಗುತ್ತದೆ. ಕಂಗಿನ ಕೃಷಿ ಧಾರಾಳವಾಗಿ ಉಳ್ಳ ವಲಯವಾದ ಕಾರಣ ಅಡಿಕೆ ಹಾಳೆ ಸುಲಭವಾಗಿ ದೊರೆಯುತ್ತದೆ. ಬೇಸಿಗೆ ಕಾಲದಲ್ಲಿ ಲಭಿಸುವ ಎಲ್ಲಾ ಹಾಳೆಗಳನ್ನು ಒಣಗಿಸಿ ಸಂಗ್ರಹಿಸಿಡಲಾಗುತ್ತದೆ. ಬಳಿಕ ಬೇಕಾದ ಗಾತ್ರದಂತೆ ಪ್ರತ್ಯೇಕಿಸಿ ಯಂತ್ರದ ಸಹಾಯದಲ್ಲಿ ತಟ್ಟೆಗಳನ್ನು ತಯಾರಿಸಲಾಗುತ್ತದೆ. ದೊಡ್ಡ-ಅಗಲ ಕಂಗಿನ ಹಾಳೆಗಳಿಂದ ಗರಿಷ್ಠ ಮೂರು ತಟ್ಟೆಗಳನ್ನು ತಯಾರಿಸಲಾಗುತ್ತದೆ ಎಂದು ಕುಟುಂಬಶ್ರೀ ಪದಾಧಿಕಾರಿಗಳು ತಿಳಿಸಿದ್ದಾರೆ.
ಮೂರು ವಿಭಿನ್ನ ಅಳತೆಗಳಲ್ಲಿನ ಹಾಳೆ ತಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಮತ್ತು ಕಪ್, ಚಮಚಗಳನ್ನೂ ಇಲ್ಲಿ ನಿರ್ಮಿಸಲಾಗುತ್ತದೆ. ದೇವಸ್ಥಾನಗಳ ಕಾರ್ಯಕ್ರಮಗಳು, ದೈವಕೋಲಗಳು, ವಿವಾಹ ಕಾರ್ಯಕ್ರಮ ಮುಂತಾದ ವಿವಿಧ ಕಾರ್ಯಕ್ರಮಗಳಿಗೆ ಪ್ರಸ್ತುತ ಇಲ್ಲಿಂದ ಬಹುಬೇಡಿಕೆಯಿಂದ ಹಾಳೆತಟ್ಟೆಗಳು ಒಯ್ಯಲ್ಪಡುತ್ತಿದೆ. ಬೇಕಲ ಬೀಚ್ ಫೆಸ್ಟಿವಲ್ ಸೇರಿದಂತೆ ಕಾರ್ಯಕ್ರಮಗಳಲ್ಲಿ ಇವರ ಹಾಳೆತಟ್ಟೆಗಳನ್ನು ಬಳಸಲಾಗಿದೆ. ತಟ್ಟೆ ನಿರ್ಮಾಣದ ನಂತರ ಉಳಿದಿರುವ ಹಾಳೆಕಸಗಳನ್ನು ಹಸುಗಳ ಆಹಾರವಾಗಿ ಬಳಸುವ ನಿಟ್ಟಿನಲ್ಲಿ ವ್ಯವಸ್ಥೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದಕ್ಕಾಗಿ ಅಗತ್ಯವಿರುವ ಯಂತ್ರೋಪಕರಣಗಳು ಈಗಾಗಲೇ ಇಲ್ಲಿಗೆ ತಲುಪಿವೆ. ಪ್ರಸ್ತುತ ಕಲ್ಲಪ್ಪಳ್ಳಿಯ ತಾತ್ಕಾಲಿಕ ಕಟ್ಟಡದಲ್ಲಿ ಘಟಕವು ಕಾರ್ಯನಿರ್ವಹಿಸುತ್ತಿದೆ. ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯು ಘಟಕಕ್ಕೆ ಸ್ವಂತ ಕಟ್ಟಡ ನಿರ್ಮಿಸಿ ನೀಡಲಾಗುವುದು ಎಂದು ತಿಳಿಸಿದೆ. ಪರಿಸರಕ್ಕೆ ಹಾನಿಕರವಾದ ಪ್ಲಾಸ್ಟಿಕ್ ಪ್ಲೇಟ್ಗಳಿಗೆ ಪರ್ಯಾಯವಾಗಿ ಬೆಳೆದುಬಂದಿರುವ ಪರಿಸರ ಸ್ನೇಹೀ ಹಾಳೆತಟ್ಟೆ ನಿರ್ಮಾಣ ಘಟಕ ಕಾಲಕ್ಕೆ ತಕ್ಕಂತೆ ಉದ್ಯಮದ ಮೂಲಕ ಸ್ವ-ಉದ್ಯೋಗದೊಂದಿಗೆ ಸಾಮಾಜಿಕ ಪ್ರತಿಬದ್ಧತೆಯ ಜೊತೆಗೆ ಮಾದರಿಯಾಗುತ್ತಿದೆ.
ಅಭಿಮತ: ರೀ ಬಿಲ್ಡ್ ಕೇರಳ ಯೋಜನೆಯಡಿ ಕುಟುಂಬಶ್ರೀ ಮೂಲಕ ಈ ಯೋಜನೆ ಜಾರಿಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ಯೋಜನೆಯ ಯಶಸ್ಸು ಬಲ ನೀಡಿದೆ. ಜೊತೆಗೆ ಅಡಿಕೆ ಕೃಷಿಕರಿಗೂ ಇದು ಮುಂದೆ ಬೆಂಬಲವಾಗಲಿದೆ. ಹಾಳೆ ಪ್ಲೇಟುಗಳ ಮಾರುಕಟ್ಟೆ ಸ್ಥಳೀಯವಾಗಿ ಲಭ್ಯವಿದ್ದು, ಜೊತೆಗೆ ಕೇರಳ ಶುಚಿತ್ವ ಮಿಷನ್ ನೊಂದಿಗೆ ಸಂಯೋಜಿಸಿ ಶಾಶ್ವತ ಮಾರುಕಟ್ಟೆ ರಚನೆಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ಮಾತುಕತೆಯಲ್ಲಿದೆ.
- ಇಕ್ಬಾಲ್ ಸಿ.ಎಚ್.
ಕುಟುಂಬಶ್ರೀ ಜಿಲ್ಲಾ ಸಂಯೋಜಕ(ಇನ್ಚಾರ್ಜ್)