ಬದಿಯಡ್ಕ: ಸಾಂಸ್ಕøತಿಕ, ಸಾಹಿತ್ತಿಕ, ಸಾಮಾಜಿಕವಾಗಿ ಪ್ರಾಚೀನ ಹಿನ್ನೆಲೆಯಿರುವ ಕನ್ನಡ ಭಾಷೆಗೆ ನವಭಾವ, ನವಜೀವ ಮತ್ತೆ ತುಂಬಬೇಕು. ಭಾಷೆ, ಭಾವ, ಬಂಧ, ಛಂದಗಳನ್ನು ಹದಗೊಳಿಸಿ ಹೊಸ ಕನ್ನಡವನ್ನು ಕಟ್ಟಬೇಕು ಎಂದು ನವದೆಹಲಿಯ ಜೆ.ಎನ್.ಯು.ವಿವಿಯ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ, ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ನವದೆಹಲಿಯ ಕರ್ನಾಟಕ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನವದೆಹಲಿಯ ಕರ್ನಾಟಕ ಸಂಘ ಸಭಾಂಗಣದಲ್ಲಿ ಭಾನುವಾರ ಅಪರಾಹ್ನ ನಡೆದ ಅಂತರ್ ರಾಜ್ಯ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ, ಕಾಸರಗೋಡು ಇದರ ಚೊಚ್ಚಲ ಪ್ರಕಟಣೆಯಾದ ಭಾವ ತರಂಗ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾವ್ಯ ಎಂದಿಗೂ ಜನಮುಖಿಯಾಗಬೇಕು. ಜನಪರವಾಗಬೇಕು. ಸಮಕಾಲೀನ ವಸ್ತು ವಿಷಯಗಳ ಬಗ್ಗೆ ಸಾರ್ವಕಾಲೀಕ ಮೌಲ್ಯದ ಕಾವ್ಯ ರಚನೆಯಾಗಬೇಕು. ಹೊಸ ಪ್ರತಿಭೆಗಳನ್ನು ಪರಿಚಯಿಸಿ ಸಾಹಿತ್ಯವನ್ನು ಸಮೃದ್ದಗೊಳಿಸಬೇಕು ಎಂದ ಅವರು ಈ ನಿಟ್ಟಿನಲ್ಲಿ ಗಡಿನಾಡು ಕಾಸರಗೋಡು ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನಿರಂತರವಾದ ಸಾಹಿತ್ಯ-ಸಾಂಸ್ಕøತಿಕ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಜಿ.ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿಜಯಲಕ್ಷ್ಮೀ ಕಟೀಲು ಕೃತಿ ಪರಿಚಯ ಮಾಡಿ ಮಾತನಾಡಿದರು. ಭಾವ ತರಂಗದ ಸಂಪಾದಕ ಹಾಗೂ ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾರಾನಾಥ ಬೋಳಾರ, ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಉಪಸ್ಥಿತರಿದ್ದು ಶುಭಹಾರೈಸಿದರು. ಸವಿ ಹೃದಯದ ಕವಿ ಮಿತ್ರರು ವೇದಿಕೆ ಪ್ರಕಟಿಸಿರುವ ಈ ಕಿರು ಹೊತ್ತಗೆಗೆ ಖ್ಯಾತ ಸಾಹಿತಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಮುನ್ನುಡಿ ಬರೆದಿದ್ದಾರೆ. ಜಿಲ್ಲೆಯ ಹಿರಿಯ-ಕಿರಿಯ 20ಕ್ಕಿಂತಲೂ ಮಿಕ್ಕಿದ ಸಾಹಿತಿಗಳ ಕವಿತೆಗಳು ಈ ಕೃತಿಯಲ್ಲಿ ಒಳಗೊಂಡಿದೆ.
ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ್ ಸ್ವಾಗತಿಸಿ, ಸುರೇಖ ಎಳವಾರ ವಂದಿಸಿದರು.



