ಕೊಚ್ಚಿ: ನಕಲಿ ದಾಖಲೆಗಳ ಮೂಲಕ ಅಂತರರಾಷ್ಟ್ರೀಯ ಅಂಗಾಂಗ ಕಳ್ಳಸಾಗಣೆ ಪ್ರಕರಣದಲ್ಲಿ ಕೊಚ್ಚಿ ಪೋಲೀಸರು ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ನೇಮಿಸಿದ್ದಾರೆ.
ನಗರ ಉಪ ಆಯುಕ್ತ ಶೆಹಿನ್ಶಾ ಮತ್ತು ತ್ರಿಕ್ಕಾಕರ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ 15 ಸದಸ್ಯರ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ಅಂಬಲಮೇಡು, ಇನ್ಫೋಪಾರ್ಕ್ ಮತ್ತು ಉದಯಂಪೇರೂರ್ ಠಾಣೆಗಳ ಇನ್ಸ್ಪೆಕ್ಟರ್ಗಳು ಕೂಡಾ ಇದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ಬಂಧಿಸಲ್ಪಟ್ಟ ಪ್ರಮುಖ ಆರೋಪಿ ಕಾಸರಗೋಡಿನ ನಜೀಬ್ ಕಲ್ಲಟ್ರ ಅವರನ್ನು ಕೇಂದ್ರೀಕರಿಸಿ ತನಿಖೆ ಪ್ರಗತಿಯಲ್ಲಿದೆ.
ಕಳೆದ ಮೂರು ವರ್ಷಗಳಲ್ಲಿ ಅಕ್ರಮ ಅಂಗಾಂಗ ಕಳ್ಳಸಾಗಣೆ ಜಾಲದ ಪ್ರಮುಖ ದಲ್ಲಾಳಿಯಾಗಿದ್ದ ಈತ ನಡೆಸಿದ ಹತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳ ವಿವರವಾದ ಪರೀಕ್ಷೆಯನ್ನು ಪೋಲೀಸರು ನಡೆಸಲಿದ್ದಾರೆ.
ಆರ್ಥಿಕ ವಂಚನೆ ಸೇರಿದಂತೆ ಸುಮಾರು ಹನ್ನೆರಡು ಪ್ರಕರಣಗಳಲ್ಲಿ ಆರೋಪಿಯಾಗಿರುವ ನಜೀಬ್, ಅಂಗಾಂಗ ಕಸಿಗಾಗಿ ಅಧಿಕೃತ ದಾಖಲೆಗಳನ್ನು ನಕಲಿ ಮಾಡಿರುವುದು ಕಂಡುಬಂದಿದೆ. ವಿಶೇಷ ತಂಡವು ಮಾಫಿಯಾದ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಉನ್ನತ ಮಟ್ಟದ ಪಿತೂರಿಗಳನ್ನು ತನಿಖೆ ಮಾಡುತ್ತದೆ.

