ಕೋಲ್ಕತಾ: ಲೋಕಸಭಾ ಸಂಸದ ಹಾಗೂ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ದಕ್ಷಿಣ 24 ಪರಗಣ ಜಿಲ್ಲೆಯ ಅಮ್ಟಲಾದಲ್ಲಿರುವ ಕಚೇರಿಯನ್ನು ನೆಲಸಮಗೊಳಿಸಲಾಗಿದೆ.
ಅನುಮೋದಿತ ಕಟ್ಟಡ ಯೋಜನೆ ಇಲ್ಲದೆ ಇದನ್ನು ನಿರ್ಮಿಸಲಾಗಿದೆ ಮತ್ತು ದಕ್ಷಿಣ 24 ಪರಗಣ ಜಿಲ್ಲಾ ಆಡಳಿತ ಕಳುಹಿಸಿದ ಎರಡು ನೋಟಿಸ್ಗಳಿಗೆ ಪ್ರತಿಕ್ರಿಯಿಸಲು ಅವರು ವಿಫಲರಾಗಿದ್ದಾರೆ. ಈ ಕಾರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಶನಿವಾರ ಬೆಳಗ್ಗೆ ಬುಲ್ಡೋಝರ್ ಬಳಸಿ ನೆಲಸಮ ಕಾರ್ಯಾಚರಣೆ ಆರಂಭಿಸಲಾಯಿತು. ಈ ಸಂದರ್ಭ ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಚೇರಿಯ ಆವರಣದ ಸುತ್ತಲೂ ಭದ್ರತೆ ಏರ್ಪಡಿಸಿದ ಬಳಿಕ ನೆಲಸಮ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲಾ ಆಡಳಿತ ಅಮ್ಟಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಗೆ ಜೂನ್ 30ರಂದು ಮೊದಲ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ನಲ್ಲಿ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ಅನುಮತಿಗಳಿಗೆ ಸಂಬಂಧಿಸಿ ವಿವರಣೆ ಹಾಗೂ ಸಂಬಂಧಿತ ದಾಖಲೆಗಳನ್ನು ನೀಡುವಂತೆ ಕೋರಲಾಗಿತ್ತು. ಜುಲೈ 7ರಂದು ಎರಡನೇ ನೋಟಿಸ್ ನೀಡಲಾಗಿತ್ತು. ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಜುಲೈ 15ರಂದು ಜಿಲ್ಲಾಡಳಿತ ಕಚೇರಿ ಮುಂದೆ ಹಾಜರಾಗಲು ಅಭಿಷೇಕ್ ಬ್ಯಾನರ್ಜಿ ಅವರಿಗೆ ಸೂಚಿಸಲಾಗಿತ್ತು.
ಯಾವುದೇ ನೋಟಿಸ್ಗೂ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ, ನಿರ್ದೇಶಿಸದಂತೆ ಬ್ಯಾನರ್ಜಿ ಅವರು ಜಿಲ್ಲಾ ಆಡಳಿತದ ಕಚೇರಿ ಮುಂದೆ ಹಾಜರಾಗಿಲ್ಲ ಎಂದು ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ತರುವಾಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆಲಸಮ ಕಾರ್ಯಾಚರಣೆಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, ಇದು ಬಿಜೆಪಿಯ ''ಸೇಡಿನ, ಹಿಂಸಾತ್ಮಕ ರಾಜಕಾರಣ'' ಎಂದು ಆರೋಪಿಸಿದೆ.
''ಈ ಪ್ರಕರಣ ಈಗಾಗಲೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದೆ. ಆದರೂ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಂಗಾಳದಲ್ಲಿ ಹೊಸ ಸಂಸ್ಕೃತಿಯನ್ನು ಪರಿಚಯಿಸುತ್ತಿದೆ. ಅದೇ ಬುಲ್ಡೋಝರ್ ಸಂಸ್ಕೃತಿ. ನಾವು ಇಂದು ಸಾಕ್ಷಿಯಾದದ್ದು ಸೇಡಿನ ಕ್ರಮ ಮತ್ತು ಕೊಳಕು, ಹಿಂಸಾತ್ಮಕ ರಾಜಕಾರಣ. ಇಲ್ಲಿ ಗೂಂಡಾರಾಜ್ ಸಂಪೂರ್ಣವಾಗಿ ಪ್ರದರ್ಶನಗೊಂಡಿದೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

