ತಿರುವನಂತಪುರ: ಕೇರಳ ರಾಜ್ಯದಾದ್ಯಂತ ಶನಿವಾರ ಭಾರಿ ಮಳೆಯಾಗಿದ್ದು, ಈ ಸಂಬಂಧದ ಅವಘಡಗಳಲ್ಲಿ ಮೂವರು ಮಕ್ಕಳು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಹಲವೆಡೆ ಸೇತುವೆಗಳು, ರಸ್ತೆಗಳು ಮುಳುಗಡೆಯಾಗಿವೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕೊಟ್ಟಾಯಂ ಜಿಲ್ಲೆಯಲ್ಲಿ ಮಣಿಮಾಲ ಮತ್ತು ಪುಲ್ಲಕ್ಕಯಾರ್ ನದಿಗಳು ಉಕ್ಕಿ ಹರಿಯುತ್ತಿವೆ. ಕೂಟ್ಟಿಕಲ್ ಸೇತುವೆ ಮುಳುಗಡೆಯಾಗಿದೆ. ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಕೋಯಿಕ್ಕೋಡ್, ಮಲಪ್ಪುರಂ, ಕಣ್ಣೂರು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿವೆ.
ವಯನಾಡ್ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ರಾಜ್ಯದಾದ್ಯಂತ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಭೂಕುಸಿತಗಳು ಸಂಭವಿಸಿವೆ.
ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹೊಳೆಯಲ್ಲಿ ಬಿದ್ದು ಇಬ್ಬರು ಬಾಲಕರು, ಹೊಂಡದಲ್ಲಿ ಬಿದ್ದು ಮತ್ತೊಬ್ಬ ಬಾಲಕ ಅಸುನೀಗಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಅನೇಕರನ್ನು ರಕ್ಷಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಕುಡಯತ್ತೂರು ಬಳಿಯ ಅಡೂರ್ಮಲಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಸುಮತಿ (65) ಎಂಬವರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿದ್ದ, ಅವರ ಪತಿ ರವಿ ಮತ್ತು ಮಗ ರತೀಶ್ ಅವರನ್ನು ನೆರೆಹೊರೆಯವರು ರಕ್ಷಿಸಿದ್ದಾರೆ. ವಾಗಮೋನ್ ಪ್ರದೇಶದಲ್ಲಿ ಪ್ರಭಾಕರನ್ ನಾಯರ್ (77) ಎಂಬವರು ಮೃತಪಟ್ಟಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಪೂಂಜಾರ್ನ ಪಯ್ಯನಿತೋಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜಾನಿ ಎಂಬವರ ಪತ್ನಿ ರೆಜಿನಾ ಜಾನಿ (46) ಹಾಗೂ ಮಗ ಜೋಸೆಫೀನ್ (24) ಸಾವಿಗೀಡಾಗಿದ್ದಾರೆ.
ತಿರುವನಂತಪುರದ ಮುತಲಪೋಳಿ ಕರಾವಳಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ. ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯ ಕೈಗೊಂಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ತಂಡವು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
ಮಳೆಯಿಂದಾಗಿ ವಿವಿಧೆಡೆ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ.
ಗಿರಿಧಾಮಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಹಲವೆಡೆ ಕಲ್ಲು ಗಣಿಗಾರಿಕೆ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.
ಮಳೆಯ ಮುನ್ಸೂಚನೆ ಆಧರಿಸಿ ಅನೇಕ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು.
ಮಧ್ಯ ಕೇರಳಂನಲ್ಲಿ ಹೆಚ್ಚು ಹಾನಿ: ಭಾರಿ ಮಳೆಯಿಂದಾಗಿ ಮಧ್ಯ ಕೇರಳಂನ ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಕೇರಳಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೇಖರ್ ಲುಕೋಸ್ ಕುರಿಯಾಕೋಸ್ ತಿಳಿಸಿದ್ದಾರೆ.
'ಭಾರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರಿಂದ ಅನೇಕರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದರು. ಇದರಿಂದ ಹೆಚ್ಚಿನ ಜೀವಹಾನಿ ಆಗುವುದು ತಪ್ಪಿದೆ' ಎಂದಿದ್ದಾರೆ.
'ನದಿಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದ್ದಾರೆ.
'ದಕ್ಷಿಣ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿದ್ದು, ನದಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಉತ್ತರ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಬೀಸಲಿದ್ದು, ಪ್ರತಿಕೂಲ ಹವಾಮಾನ ಮುಂದುವರಿಯಬಹುದು' ಎಂದು ಮಾಹಿತಿ ನೀಡಿದ್ದಾರೆ.
ವಿ.ಡಿ. ಸತೀಶನ್ ಮುಖ್ಯಮಂತ್ರಿಮಳೆ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ್ದು ಅಗತ್ಯ ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಲಾಗಿದೆ
ಭಾರಿ ಮಳೆ ಮುಂದುವರಿಕೆ
ಕೇರಳದ ಕೆಲವು ಭಾಗಗಳಲ್ಲಿ ಭಾನುವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಪತ್ತನಂತಿಟ್ಟ ಕೊಟ್ಟಾಯಂ ಇಡುಕ್ಕಿ ಮಲಪ್ಪುರಂ ಕೋಯಿಕ್ಕೋಡ್ ವಯನಾಡ್ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಎರ್ನಾಕುಲಂ ತ್ರಿಶ್ಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರಕ್ಷಣಾ ತಂಡಗಳು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು. ದುರ್ಬಲ ಪ್ರದೇಶಗಳಲ್ಲಿರುವ ಜನರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
'ಶಬರಿಮಲೆ ದೇಗುಲ ಭೇಟಿ ತಪ್ಪಿಸಿ'
ಭಾರಿ ಮಳೆ ಹಾಗೂ ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಬಾರದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮನವಿ ಮಾಡಿದೆ.
'ನಿರಪುತ್ತರಿ ಪೂಜೆ'ಗಾಗಿ ಆಗಸ್ಟ್ 2ರಿಂದ 3ರವರೆಗೆ ದೇವಾಲಯವನ್ನು ತೆರೆಯಲಾಗುತ್ತದೆ. ಈ ವೇಳೆ ಭಕ್ತರು ದೇಗುಲಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಆಗಸ್ಟ್ 16ರಿಂದ 21ರವರೆಗೆ ಮಲಯಾಳಂ ತಿಂಗಳಾದ 'ಚಿಂಗಂ'ನಲ್ಲಿ ದೇವಸ್ಥಾನ ತೆರೆಯುವ ಸಮಯದಲ್ಲಿ ಅಥವಾ ಆಗಸ್ಟ್ 24ರಿಂದ 28ರವರೆಗೆ ನಡೆಯುವ ಓಣಂ ಹಬ್ಬದ ಪೂಜೆಗಳ ಸಮಯದಲ್ಲಿ ಭಕ್ತರು ತಮ್ಮ ಯಾತ್ರೆಯನ್ನು ಕೈಗೊಳ್ಳಬಹುದು' ಎಂದು ಟಿಡಿಬಿ ಸಲಹೆ ನೀಡಿದೆ.

