ನ್ಯೂಯಾರ್ಕ್ (PTI): 'ವಿವಿಧತೆಯಲ್ಲಿ ಏಕತೆಯು ಭಾರತದ ಡಿಎನ್ಎನಲ್ಲಿಯೇಇದೆ. ಇದನ್ನು ಆಚರಿಸಿ, ಗೌರವಿಸಿ, ಸ್ವೀಕರಿಸಬೇಕು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ತಿಳಿಸಿದರು.
ಇಲ್ಲಿನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ 'ಅಮೆರಿಕದಲ್ಲಿನ ಹಿಂದೂಗಳ ಭಾಗವಹಿಸುವಿಕೆ ಮತ್ತು ಚರ್ಚೆ' (ಎಎಚ್ಇಎಡಿ) ಸಂಸ್ಥೆಯು ಶನಿವಾರ ರಾತ್ರಿ ಆಯೋಜಿಸಿದ್ದ 'ವಿಶ್ವ ಏಕತೆ ಸಂಭ್ರಮಾಚರಣೆ' ಕಾರ್ಯಕ್ರಮದಲ್ಲಿ ಆರು ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
'ನಾವು ಅಮೆರಿಕ, ಸಂಯುಕ್ತ ಸಂಸ್ಥಾನ ಅಮೆರಿಕ ಎಂದು ಚರ್ಚಿಸುವ ವೇಳೆ ಒಂದು ಪದವು ಸದಾ ಚರ್ಚೆಯಲ್ಲಿರುತ್ತದೆ. ಅದುವೇ 'ಬಹುತ್ವ'. ಭಾರತದಲ್ಲಿ ಇದನ್ನೇ ವಿವಿಧತೆಯಲ್ಲಿ ಏಕತೆ ಹೆಸರಿನಲ್ಲಿ ಚರ್ಚಿಸಲಾಗುತ್ತದೆ. ವೈವಿಧ್ಯವನ್ನು ಅಳವಡಿಸಿಕೊಂಡು, ಸಮುದಾಯ ಪ್ರಜ್ಞೆಯನ್ನು ಬೆಂಬಲಿಸಬೇಕು' ಎಂದು ಕರೆ ನೀಡಿದರು.
'ನಾವು ಎಲ್ಲರಿಗೂ ಋಣಿಯಾಗಿಬೇಕು. ನಾವು ಇಲ್ಲಿಂದ ಎಲ್ಲವನ್ನೂ ಪಡೆದುಕೊಳ್ಳುತ್ತೇವೆ. ಮರಳಿ ನೀಡುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.
ಕರ್ಮಭೂಮಿಗೆ ನಿಷ್ಠರಾಗಿ: ಅಮೆರಿಕದಲ್ಲಿರುವ ಭಾರತೀಯರು ಯಾವಾಗಲೂ ತಮ್ಮ ಕರ್ಮಭೂಮಿಗೆ ನಿಷ್ಠರಾಗಿ ನಡೆದುಕೊಳ್ಳಬೇಕು. ಆದರೆ, ನಿಮ್ಮ ಜನ್ಮಭೂಮಿ ಕಲಿಸಿಕೊಟ್ಟ ಏಕತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು' ಎಂದರು.
ರಬಿನಿಕಲ್ ಅಸೆಂಬ್ಲಿಯ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ರಬ್ಬಿ ಜಾಕಬ್ ಬ್ಲುಮೆಂಥಲ್, ನ್ಯೂಯಾರ್ಕ್ನ ಐತಿಹಾಸಿಕ ರಿವರ್ ಚರ್ಚ್ನ ಹಿರಿಯ ರೆವರೆಂಡ್ ಆಯಂಡ್ರಿನ್ ತ್ರೊನ್, ಐತಿಹಾಸಿಕ ಮುಹಮ್ಮದ್ ಮಸೀದಿ ಮುಖ್ಯಸ್ಥ ತಾಲಿಬ್ ಎಂ.ಶರೀಫ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ಐದು ಅಂಶ ಜಾರಿಗೆ ವಾಗ್ದಾನ
30 ದೇಶಗಳ 180 ಧಾರ್ಮಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಐದು ಅಂಶಗಳ ಕ್ರಿಯೆ ಜಾರಿಗೊಳಿಸುವ ವಾಗ್ದಾನ ನೀಡಿದರು.
l ಕ್ರಿಯೆಗೆ ಕರೆನೀಡಿ, ನಮ್ಮಿಂದಲೇ ಆರಂಭಿಸುವುದು
l ಒಬ್ಬರಿಗಾಗಿ ಮತ್ತೊಬ್ಬರು ಕೈ ಜೋಡಿಸುವುದು
l ನಮ್ಮ ಅಗತ್ಯಕ್ಕೂ ಮುನ್ನ ಬಾಂಧವ್ಯ ಬೆಳೆಸಿಕೊಳ್ಳುವುದು
l ಒಟ್ಟಾಗಿ ಕೆಲಸ ಮಾಡುವುದು
l ಭವಿಷ್ಯಕ್ಕಾಗಿ ಹೊಣೆಗಾರಿಕೆ ಹೊರುವುದು

