ಮಾರಕ ಕೊರೊನಾ ಸೋಂಕು ಭಾರತಕ್ಕೆ ಕಾಲಿರಿಸಿ ಈಗಾಗಲೇ ವರ್ಷ ಒಂದು ತುಂಬಿದೆ. ಜೊತೆಗೆ ರಾಷ್ಟ್ರದ ಮೇಲೆ ಲಾಕ್ ಡೌನ್ ಎಂಬ ಪೆಡಂಭೂತವನ್ನೂ ಹೇರಿದ ದಿನವೂ ಕೆಲವೇ ದಿನಗಳಲ್ಲಿ ವರ್ಷ ಒಂದು ತುಂಬಲಿದೆ. ಆದರೆ ಇದೀಗ ನವ ಮಾಧ್ಯಮಗಳು ಮತ್ತೆ ಗುಲ್ಲೆಬ್ಬಿಸುತ್ತಿವೆ, ಮತ್ತೆ ಲಾಕ್ ಡೌನ್.....ಮತ್ತೆ ಲಾಕ್ ಡೌನ್..........ಇದು ನಿಜವಾಗಿಯೂ ಆತಂಕ ಬಿತ್ತುವ, ಯಾರನ್ನೋ ಎತ್ತುವ ಕೆಲಸವೋ ಎಂಬ ಸಂಶಯ ಇದೀಗ ಮನೆಮಾಡಿದೆ!
ಒಂದು ಹಂತದಲ್ಲಿ ಕೆಳಮಟ್ಟಕ್ಕೆ ಬಂದಿದ್ದ ಕೋವಿಡ್ ಅಂಕಿಅಂಶಗಳು ಮತ್ತೀಗ ಮತ್ತೆ ಮೇಲೇರತೊಡಗಿದೆ!. ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಚಾನೆಲ್ ಗಳ ಮುಖಪುಟ/ಮುಖ್ಯ ಸುದ್ದಿ "ಕೊರೊನಾ" ರಾರಾಜಿಸತೊಡಗಿದೆ. ಸರ್ಕಾರಗಳೂ ಲಾಕ್ ಡೌನ್ ಬೆದರಿಕೆ ಹೇರುತ್ತಿದೆ. ದೇಶದ ಹಲವೆಡೆ ಈಗಾಗಲೇ ಒಂದೊಂದು ವಾರಗಳ ಲಾಕ್ ಡೌನ್ ಹೇರಲಾಗಿದೆ. ಇದರಿಂದ ಜನಸಾಮಾನ್ಯರು, ಸಣ್ಣ ವ್ಯಾಪಾರಿಗಳು, ಕೃಷಿಕರು, ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಇತರರು ಮತ್ತೆ ಜೀವಕಳೆ ಕಳಕೊಳ್ಳತೊಡಗಿದ್ದಾರೆ.
ದೇಶಾದ್ಯಂತ ಈಹಿಂದೆ ಮೂರು ತಿಂಗಳ ಕಾಲ ಹೇರಲಾಗಿದ್ದ ಲಾಕ್ ಡೌನ್ ನಿಂದ ಸೋಂಕು ಇನ್ನಿಲ್ಲವಾಗಿದೆಯೇ?! ಬಹುಷಃ ಲಾಕ್ ಡೌನ್ ಸಂದರ್ಭ ತೀವ್ರ ಏರಿಕೆಯಲ್ಲಿದ್ದ ಸೋಂಕು, ಆ ಬಳಿಕವೇ ನಿಯಂತ್ರಣಕ್ಕೆ ಬಂದಿದೆ ಎಂಬ ಸತ್ಯವನ್ನು ಮರೆಯೋಣವೇ? ಯಾವುದೇ ಪೂರ್ವ ಯೋಜನೆ ಇಲ್ಲದ ಲಾಕ್ ಡೌನ್ ಕಾರಣ ಅತ್ಯಧಿಕ ಸಾವು ಉಂಟಾಯಿತೆಂದು ಅಧ್ಯಯನ ವರದಿಯೊಂದು ಈಗಾಗಲೇ ದೃಢಪಡಿಸಿದೆ. ಕ್ಷಯ, ಅಸ್ತಮಾ ದಂತಹ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು ಸೂಕ್ತ ಚಿಕಿತ್ಸೆ ಲಭ್ಯವಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಜೀವವನ್ನೇ ಕಳಕೊಂಡರು. ಆದರೆ ಹೀಗೆ ಮೃತರಾದವರ ಅಂಕಿಅಂಶಗಳು ಎಲ್ಲೂ ದಾಖಲಾಗಿಲ್ಲ. ಸತ್ತವರಲ್ಲಿ ಕೊರೊನಾ ಪಾಸಿಟಿವ್ ಇದ್ದವರೆಲ್ಲ ಸೋಂಕಿನಿಂದಲೇ ಮೃತಪಟ್ಟರೆಂದು ಆರೋಗ್ಯ ಇಲಾಖೆಯ ವರದಿಯ ನಕಲನ್ನು ಮಾಧ್ಯಮಗಳೂ ಪ್ರಕಟಿಸಿದವು. ನೇರವಾಗಿ ಕೊರೊನಾ ಸೋಂಕಿನಿಂದಲೇ ಮೃತರಾದವರು ಶೇ.2 ರಷ್ಟೂ ಇಲ್ಲವೆಂದು ವೈದ್ಯಕೀಯ ತಜ್ಷರೇ ಹೇಳಿದ್ದಾರೆ.
ಕೊರೋನ ವೈರಸ್ ಮಾರಣಾಂತಿಕವಲ್ಲ, ಅದು ಅತಿ ಶೀಘ್ರವಾಗಿ ಹರಡುವ ವೈರಸ್ ಅಷ್ಟೇ ಎನ್ನುವುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಯಾವುದೇ ಔಷಧಿಯನ್ನು ಕಂಡು ಹಿಡಿಯದೇ ಇದ್ದರೂ, ಯಾವುದೇ ಔಷಧಿ ಸೇವಿಸದೇ ಇದ್ದರೂ ಲಕ್ಷಾಂತರ ಕೊರೋನ ಸೋಂಕಿತರು ಈ ದೇಶದಲ್ಲಿ ಗುಣಮುಖರಾಗಿದ್ದಾರೆ. ಉಸಿರಾಟದ ಸಮಸ್ಯೆ ಇರುವವರಷ್ಟೇ ಈ ವೈರಸ್ನ ಕುರಿತಂತೆ ತುಸು ಆತಂಕ ಪಡಬೇಕು. ಆದರೆ ದುರದೃಷ್ಟಕ್ಕೆ, ಆಸ್ಪತ್ರೆಗಳು ಯಾವುದೇ ಕೊರೋನ ರೋಗ ಲಕ್ಷಣಗಳಿಲ್ಲದೆ ಇರುವವರನ್ನೂ ಪಾಸಿಟಿವ್ ಹೆಸರಲ್ಲಿ ಬಂಧಿಸಿ, ಕ್ವಾರಂಟೈನ್ ಮಾಡಿಸಿ ಅವರಿಂದ ಲಕ್ಷಗಟ್ಟಲೆ ಹಣವನ್ನು ದೋಚಿದವು. ಸತ್ತವರ ಮೃತದೇಹವನ್ನು ಕುಟುಂಬಕ್ಕೂ ನೀಡದೆ, ಗುಟ್ಟಾಗಿ, ನಿಗೂಢವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಒಂದು ವೇಳೆ, ಕೊರೋನ ಅಷ್ಟರಮಟ್ಟಿಗೆ ಮಾರಣಾಂತಿಕವೆಂದಾದರೆ, ಈ ದೇಶದ ಬೀದಿ ಬದಿಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ಹೆಣವಾಗಿ ಬೀಳಬೇಕಾಗಿತ್ತು. ಯಾಕೆಂದರೆ ಅವರಿಗೆ ಯಾವ ಆರೋಗ್ಯ ಭದ್ರತೆಯೂ ಇದ್ದಿರಲಿಲ್ಲ. ಕೊರೋನ ವೈರಸ್ನಿಂದ ಸಂತ್ರಸ್ತರಾದವರಲ್ಲಿ ಬಹುತೇಕ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಜನರು ಎನ್ನುವುದು ಗಮನಾರ್ಹ.
ಲಾಕ್ಡೌನ್ನಿಂದ ಕೊರೋನ ಇಳಿಮುಖವಾಯಿತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗೆ ನೋಡಿದರೆ, ಲಾಕ್ಡೌನ್ ಸಡಿಲಗೊಳಿಸಿದ ಬಳಿಕವೇ ಕೊರೋನಾ ಇಳಿಮುಖವಾಗುತ್ತಾ ಬಂತು. ಅಷ್ಟರಲ್ಲಿ ಜನ ಸಾಮಾನ್ಯರ ಬದುಕು ಸರ್ವನಾಶವಾಗಿತ್ತು. ನೋಟು ನಿಷೇಧದಿಂದ ಮಕಾಡೆ ಮಲಗಿದ್ದ ಭಾರತದ ಆರ್ಥಿಕತೆಯ ಮೇಲೆ ಲಾಕ್ಡೌನ್ ಚಪ್ಪಡಿ ಕಲ್ಲನ್ನು ಹಾಕಿತು. ಲಾಕ್ಡೌನ್ನಿಂದಾದ ಅನಾಹುತದಿಂದ ದೇಶ ಇನ್ನೂ ಚೇತರಿಸಿಲ್ಲ. ಇಂದು ಲಾಕ್ಡೌನ್ನಿಂದಾಗಿ ದೇಶದಲ್ಲಿ ಕ್ಷಯ ರೋಗ ವೃದ್ಧಿಯಾಗಿದೆ. ನಾವು ಆತಂಕ ಪಡಬೇಕಾದುದು ಕ್ಷಯದಂತಹ ಮಾರಕ ರೋಗಗಳ ಬಗ್ಗೆ. ಜೊತೆಗೆ ಅಪೌಷ್ಟಿಕತೆ ವಿಪರೀತವಾಗಿದೆ. ಅಪೌಷ್ಟಿಕತೆ ಜನರನ್ನು ಇನ್ನಿತರ ರೋಗಗಳಿಗೆ ತಳ್ಳಿದೆ. ಲಕ್ಷಾಂತರ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅವರಿಗಿನ್ನೂ ಹೊಸ ಉದ್ಯೋಗ ಸಿಕ್ಕಿಲ್ಲ.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಭಾರತಕ್ಕೆ ಬಂದಿದ್ದಾರೆ. ಅವರು ತವರೂರಲ್ಲೇ ಸಣ್ಣ ಪುಟ್ಟ ಉದ್ದಿಮೆಗಳನ್ನು ತೆರೆಯಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆದರೆ ಸರಕಾರದ ಲಾಕ್ಡೌನ್ ಬೆದರಿಕೆಯಿಂದಾಗಿ ಅವರು ಹಿಂದೇಟು ಹಾಕುತ್ತಿದ್ದಾರೆ. ಇಂದು ಈ ದೇಶದ ಜನರು ಕೊರೋನಕ್ಕೆ ಅಂಜಿಲ್ಲ. ಆದರೆ ಲಾಕ್ಡೌನ್ಗೆ ಅಂಜುತ್ತಿದ್ದಾರೆ. ಒಂದು ದಿನ 'ಭಾರತ ಬಂದ್' ಆದರೆ ಆಗುವ ನಾಶ, ನಷ್ಟದ ಕುರಿತಂತೆ ಈ ದೇಶ ಚಿಂತೆ ಮಾಡುವ ಕಾಲವೊಂದಿತ್ತು. ಒಂದು ವಾರ ಕರ್ಫ್ಯೂ ವಿಧಿಸಿದರೆ ಜನಸಾಮಾನ್ಯರು ಕಂಗಾಲಾಗಿ ಬಿಡುವ ದಿನಗಳಿದ್ದವು. ಈ ದೇಶದ ಜನರು ಜೀವನದಲ್ಲಿ ಇದೇ ಮೊದಲು ಎರಡು ತಿಂಗಳ ಕಾಲ ಭಾರತ ಬಂದ್ನ್ನು ಅನುಭವಿಸಬೇಕಾಯಿತು. ಇನ್ನೊಮ್ಮೆ ದೇಶಾದ್ಯಂತ ಲಾಕ್ಡೌನ್ ಮಾಡುವುದೆಂದರೆ, ಜರ್ಮನಿಯಲ್ಲಿ ಹಿಟ್ಲರ್ ಗ್ಯಾಸ್ ಚೇಂಬರ್ ಮೂಲಕ ಯಹೂದಿಗಳನ್ನು ಸಾಮೂಹಿಕವಾಗಿ ಕೊಂದಂತೆ. ಅಲ್ಲಿ ಜನರು ಒಮ್ಮೆಲೆ ಸತ್ತರು. ಈ ದೇಶದ ಕಾರ್ಮಿಕರು, ಬಡವರು, ಮಧ್ಯಮ ವರ್ಗದ ಜನರು ಹಂತ ಹಂತವಾಗಿ ನರಳಿ ಸಾಯುತ್ತಾರೆ.
ಏಕಾಏಕಿ ಮತ್ತೆ ಕೊರೊನಾತಂಕವನ್ನು ಬಿತ್ತುವುದರ ಹಿಂದೆ 'ಲಸಿಕೆ ರಾಜಕೀಯ' ಕೆಲಸ ಮಾಡುತ್ತಿದೆ ಎಂದು ಜನಸಾಮಾನ್ಯರು ಆರೋಪಿಸುತ್ತಿದ್ದಾರೆ. ಸ್ವದೇಶಿ 'ಕೋವ್ಯಾಕ್ಸಿನ್' ಲಸಿಕೆಯ ಕುರಿತಂತೆ ದೇಶದ ಜನರು ಪೂರ್ಣ ವಿಶ್ವಾಸವನ್ನು ಹೊಂದಿಲ್ಲ ಅಥವಾ ಅದರ ಕುರಿತಂತೆ ವಿಶ್ವಾಸವನ್ನು ಬಿತ್ತುವಲ್ಲಿ ಸರಕಾರ ವಿಫಲವಾಗಿದೆ. ಆರೋಗ್ಯ ಸಿಬ್ಬಂದಿಯೇ ಲಸಿಕೆಯನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ. ಲಸಿಕೆಯ ವಿಷಯದಲ್ಲಿ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಲಾಕ್ಡೌನ್ ಬೆದರಿಕೆಯನ್ನು ಒಡ್ಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 'ಲಸಿಕೆಯನ್ನು ಪಡೆಯಿರಿ-ಇಲ್ಲವೇ ಲಾಕ್ಡೌನ್ ಅನುಭವಿಸಿ' ಎನ್ನುವ ಬ್ಲಾಕ್ಮೇಲ್ ತಂತ್ರವಿದು ಎನ್ನುವುದು ಹಲವು ವೈದ್ಯಕೀಯ ತಜ್ಞರ ಆರೋಪ. ಅದು ನಿಜವೇ ಆಗಿದ್ದರೆ, ಇಂತಹ ನಿಷ್ಕರುಣಿ ಸರಕಾರ ಹಿಂದೆಂದೂ ಈ ದೇಶವನ್ನು ಆಳಿಲ್ಲ ಎಂದು ಹೇಳಬೇಕಾಗುತ್ತದೆ.
ಹಾಗೆಂದು, ಕೊರೋನ ಕುರಿತಂತೆ ಸಂಪೂರ್ಣ ನಿರ್ಲಕ್ಷವೂ ಸಲ್ಲ. ಯಾರೆಲ್ಲ ಕೊರೋನ ಸಂಬಂಧಿ ರೋಗಲಕ್ಷಣಗಳನ್ನು ಹೊಂದಿದ್ದಾರೆಯೋ ಅವರು ಮತ್ತು ಅವರ ಕುಟುಂಬಸ್ಥರು ಜಾಗರೂಕತೆಯನ್ನು ವಹಿಸಬೇಕು. ರೋಗ ಲಕ್ಷಣಗಳುಳ್ಳವರು ಚೇತರಿಸಿಕೊಳ್ಳುವವರೆಗೆ ಯಾವ ಕಾರಣಕ್ಕೂ ಸಾರ್ವಜನಿಕವಾಗಿ ಓಡಾಡಬಾರದು. ಅವರ ಕುಟುಂಬಸ್ಥರು ಕಡ್ಡಾಯವಾಗಿ ಮಾಸ್ಕ್ನ್ನು ಧರಿಸಿಯೇ ಸಾರ್ವಜನಿಕ ವ್ಯವಹಾರಗಳನ್ನು ಮಾಡಬೇಕು. ಜನರಲ್ಲಿ ಜಾಗೃತಿಯನ್ನು ಬಿತ್ತುವ ಮೂಲಕ ಮಾತ್ರ ನಾವು ಕೊರೋನಾವನ್ನು ಎದುರಿಸಬಹುದೇ ಹೊರತು, ಲಾಕ್ಡೌನ್ ಮೂಲಕ ಅಲ್ಲ. ಇದೇ ಸಂದರ್ಭದಲ್ಲಿ ಲಸಿಕೆಯ ಕುರಿತಂತೆ ಜನರಲ್ಲಿ ವಿಶ್ವಾಸವನ್ನು, ಭರವಸೆಯನ್ನು ಮೂಡಿಸಬೇಕು. ಆಗ ಜನರೇ ಲಸಿಕೆ ಪಡೆಯಲು ಧಾವಿಸುತ್ತಾರೆ. ಬೆದರಿಕೆಯ ಮೂಲಕ ಲಸಿಕೆಯನ್ನು ನೀಡುವುದರಿಂದ, ಅದು ಜನರಲ್ಲಿ ಇನ್ನಷ್ಟು ಆತಂಕವನ್ನು ಬಿತ್ತಿ, ಅವರ ಆರೋಗ್ಯವನ್ನು ಕೆಡಿಸುವ ಸಾಧ್ಯತೆಗಳಿವೆ.



