ಕುಂಬಳೆ: ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ, ಮರ್ಚೆಂಟ್ಸ್ ಯೂತ್ ವಿಂಗ್ ನೇತೃತ್ವದಲ್ಲಿ ಕುಂಬಳೆ ವ್ಯಾಪಾರಿಗಳು ಸೋಮವಾರ ಬೆಳಿಗ್ಗೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕುಂಬಳೆ ಪಂಚಾಯತಿ ಕಚೇರಿಗೆ ಮಾರ್ಚ್ ನಡೆಸಿದರು. ಕುಂಬಳೆ ವ್ಯಾಪಾರಿ ಭವನದಿಂದ ಆರಂಭಗೊಂಡ ವ್ಯಾಪಾರಿಗಳ ಮೆರವಣಿಗೆ ಪೇಟೆ ಸುತ್ತಿ ಪೋಲೀಸ್ ಠಾಣೆ ಮುಂದೆ ಸಮಾಪ್ತಿಗೊಂಡಿತು. ಕುಂಬಳೆ ಪೇಟೆಯ ಎಲ್ಲಾ ವ್ಯಾಪಾರಿಗಳು ಮಾರ್ಚ್ನಲ್ಲಿ ಪಾಲ್ಗೊಂಡಿದ್ದರು.
ಬದಿಯಡ್ಕ ಭಾಗದಿಂದ ಕುಂಬಳೆಗೆ ತಲುಪುವ ಬಸ್ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವ ಕ್ರಮವನ್ನು ನಿಲ್ಲಿಸಬೇಕು, ಹಳೆಯ ಬಸ್ ನಿಲ್ದಾಣವನ್ನು ಪ್ರಯಾಣಿಕರಿಗಾಗಿ ತೆರೆದುಕೊಡಬೇಕು, ಪುನರ್ ನಿರ್ಮಾಣಕ್ಕಾಗಿ ಮುರಿದು ತೆಗೆದ ಕುಂಬಳೆ ಬಸ್ ನಿಲ್ದಾಣವನ್ನು ಶೀಘ್ರ ನಿರ್ಮಿಸಬೇಕು, ವ್ಯಾಪಾರಿಗಳಿಗೆ ಪುನರ್ವಸತಿ ವ್ಯವಸ್ಥೆ ಏರ್ಪಡಿಸಬೇಕು, ಆಟೋ ರಿಕ್ಷಾಗಳಿಗೆ ಪಂಚಾಯತಿ ನೋಂದಾವಣೆ ಕಡ್ಡಾಯಗೊಳಿಸಬೇಕು, ಟೇಕ್ ಎ ಬ್ರೇಕ್, ಮೀನುಮಾರುಕಟ್ಟೆಗಳನ್ನು ತೆರೆದುಕೊಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ವ್ಯಾಪಾರಿಗಳು ಸೋಮವಾರ ಪಂಚಾಯತಿ ಕಚೇರಿಗೆ ಮಾರ್ಚ್ ನಡೆಸಿದ್ದಾರೆ. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕದ ಅಧ್ಯಕ್ಷ ರಾಜೇಶ್ ಮನಯತ್ತ್, ಪ್ರಧಾನ ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್ ಸಿಟಿ, ಮರ್ಚೆಂಟ್ಸ್ ಯೂತ್ ವಿಂಗ್ ಕುಂಬಳೆ ಘಟಕದ ಅಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಹೈದರ್, ಕೋಶಾಧಿಕಾರಿ ಸಿದ್ದಿಕ್ ಮುಬಾರಕ್ ಮೊದಲಾದವರು ನೇತೃತ್ವ ನೀಡಿದರು. ಪಂಚಾಯತಿಗೆ ಪ್ರತಿಭಟನಾ ಮಾರ್ಚ್ಗೆ ಬೆಂಬಲ ಸೂಚಿಸಿ ಮಧ್ಯಾಹ್ನವರೆಗೆ ವ್ಯಾಪಾರಿಗಳು ಕುಂಬಳಯಲ್ಲಿ ಅಂಗಡಿಗಳನ್ನು ಮುಚ್ಚಿ ಹರತಾಳ ಬೆಂಬಲಿಸಿದರು. ಇದೇ ವೇಳೆ ಖಾಸಗಿ ಬಸ್ ಮುಷ್ಕರ ಕೂಡಾ ನಡೆದಿರುವುದರಿಂದ ಕುಂಬಳೆ ಪೇಟೆಯಲ್ಲಿ ಜನಸಂಖ್ಯೆ ಭಾರೀ ಕಡಿಮೆ ಕಂಡುಬಂದಿದೆ.

.jpg)
