ಬದಿಯಡ್ಕ: ಮಠ ಹತ್ತಿರ ಎಂಬ ಭಾವನೆ ಇದ್ದರೆ ಎಷ್ಟುದೂರದಿಂದಲೂ ಶಿಷ್ಯಭಕ್ತರು ಬಂದು ಸೇವೆ ಸಲ್ಲಿಸುತ್ತಾರೆ. ಮಠ ಮತ್ತು ಶಿಷ್ಯರ ನಡುವಿನ ಸಂಬಂಧ ಆತ್ಮದ ಸಂಬಂಧ. ಈ ಭಾಗ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದ ಹಲವು ಕಾರ್ಯಕರ್ತರನ್ನು ಶ್ರೀಮಠಕ್ಕೆ ಕೊಡುಗೆಯಾಗಿ ನೀಡಿದೆ. ಹೊಸ ತಲೆಮಾರು ಕೂಡಾ ಈ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಮುಳ್ಳೇರಿಯ ಮಂಡಲದ ನೀರ್ಚಾಲು, ಚಂದ್ರಗಿರಿ, ಈಶ್ವರಮಂಗಲ, ಕುಂಬಳೆ, ಪೆರಡಾಲ ಮತ್ತು ಪಳ್ಳತ್ತಡ್ಕ ವಲಯಗಳ ಶಿಷ್ಯ ಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಯಾವುದೇ ಕಾರ್ಯದ ಆರಂಭದ ಉತ್ಸಾಹ ಕೊನೆಯ ವರೆಗೂ ಇರಬೇಕು. ಇದು ನಮ್ಮ ಕಾರ್ಯಕರ್ತರಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬರನ್ನೂ ಮಠದ ಸೇವೆಯಲ್ಲಿ ತೊಡಗಿಸಲು ಹಿರಿಯ ಕಾರ್ಯಕರ್ತರು ಶ್ರಮವಹಿಸಬೇಕು. ಎಲ್ಲರೂ ಸೇವೆಯಲ್ಲಿ ತೊಡಗಿಸಿಕೊಂಡಾಗ ಅದು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಹವಿನುಡಿ ಸಂಚಿ ಲೋಕಾರ್ಪಣೆ :
ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಅಧ್ಯಾಪಕ ಅಡ್ಕ ಗೋಪಾಲಕೃಷ್ಣ ಭಟ್ ಬರೆದಿರುವ ಹವಿನುಡಿ ಸಂಚಿ ಎಂಬ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿ, ಮರೆತು ಹೋಗುವ ಕನ್ನಡಪದವನ್ನು ಸಂಗ್ರಹಿಸಿ ಪ್ರಕಟಿಸಿರುವ ಕಾರ್ಯ ಶ್ಲಾಘನೀಯ ಎಂದರು. ಹಳೆಯ ಶಬ್ದಗಳು, ಗಾದೆಗಳು ಅಜ್ಜನ ಆಶೀರ್ವಾದ ರೂಪದಲ್ಲಿ ಸಮಾಜಕ್ಕೆ ಲಭ್ಯವಾಗಿದೆ ಎಂದರು. ಕುಂಬಳೆ ಸೀಮೆಯಲ್ಲಿರುವ ಹವಿಗನ್ನಡದ ಅಪರೂಪದ ಶಬ್ದಗಳ ಕೋಶ ಇದಾಗಿದ್ದು, ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ. ಈ ಶಬ್ದಗಳನ್ನು ಬಳಸಿ, ಬೆಳೆಸಬೇಕು ಎಂದು ಸೂಚಿಸಿದರು. ಆಯಾ ಪ್ರಾಂತ್ಯಗಳ ಹಳೆಯ ಶಬ್ದಗಳನ್ನು ಉಳಿಸಬೇಕು ಎಂದು ಸಲಹೆಯಿತ್ತರು. ಇಂಗ್ಲೀಷ್ ಪದ ಬಿಡುವ ಅಭಿಯಾನದಲ್ಲಿ ಟೂತ್ಬ್ರೆಷ್ ಪದವನ್ನು ಬಿಟ್ಟು ದಂತಕೂರ್ಚ ಎಂಬ ಶಬ್ದವನ್ನು ಬಳಸಬಹುದು ಎಂದರು. ಮೊದಲು ಶಬ್ದಗಳನ್ನು ಬದಲಿಸಿ ಆ ಬಳಿಕ ಅದರ ಬಳಕೆಗೂ ತಿಲಾಂಜಲಿ ನೀಡೋಣ. ನಮ್ಮ ಬಗ್ಗೆ, ನಮ್ಮ ಭಾಷೆಯ ಬಗ್ಗೆ ಅಭಿಮಾನ ಮೂಡಲಿ ಎಂದು ಆಶಿಸಿದರು.
ಮಹಾಮಂಡಲ ಉಪಾಧ್ಯಕ್ಷ ಶಾಂತಾರಾಮ ಹೆಗಡೆ ಹಿರೇಮನೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಡಾ.ಡಿ.ಪಿ. ಭಟ್, ಗುರುಕುಲಗಳ ಸಮಿತಿ ಅಧ್ಯಕ್ಷ ಅರುಣ್ ಹೆಗಡೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ, ಅಡ್ಕ ಗೋಪಾಲಕೃಷ್ಣ ಭಟ್ಟರ ಪುತ್ರ ಡಾ. ಶಿವಕುಮಾರ ಅಡ್ಕ ದಂಪತಿಗಳು ಉಪಸ್ಥಿತರಿದ್ದರು.

.jpg)
