ಕೋಲ್ಕತ್ತ: ಕಲ್ಕತ್ತಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಮತ್ತು ಪಶ್ಚಿಮ ಬಂಗಾಳದ ವಕ್ಫ್ ಬೋರ್ಡ್ನ ಮುಖ್ಯಸ್ಥ ಶಹೀದುಲ್ಲಾ ಮುಂಶಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರ ವಿರುದ್ಧ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸುವುದಾಗಿ ಮುಂಶಿ ಹೇಳಿದ್ದಾರೆ.
ಚುನಾವಣಾ ಆಯೋಗವು ಇತ್ತೀಚೆಗೆ ಪೂರಕ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಬಳಿಕ ಮುಂಶಿ ಅವರಿಗೆ ತಮ್ಮ ಹೆಸರು ಅಳಿಸಿರುವ ಬಗ್ಗೆ ತಿಳಿದುಬಂದಿದೆ.
'ನನ್ನ ಪತ್ನಿ ಮತ್ತು ಪುತ್ರನ ಹೆಸರುಗಳು ಇನ್ನೂವರೆಗೂ 'ವಿಚಾರಣೆ ಹಂತದಲ್ಲಿದೆ' ಎನ್ನುವ ವಿಭಾಗದಲ್ಲಿದೆ. ನನ್ನ ಹೆಸರು ಕೂಡ ಇದೇ ವಿಭಾಗದಲ್ಲಿ ಇತ್ತು. ನಾನು ಆಯೋಗ ನಡೆಸಿದ್ದ ವಿಚಾರಣೆಗೂ ಹಾಜರಾಗಿ, ನನ್ನ ಪಾಸ್ಪೋರ್ಟ್ ನೀಡಿದ್ದೆ. ಆದರೂ ನನ್ನ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ' ಎಂದು ಮುಂಶಿ ಹೇಳಿದ್ದಾರೆ.
'ಒಬ್ಬ ನಿವೃತ್ತ ನ್ಯಾಯಾಧೀಶ ಹೆಸರು ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದರೆ, ಸಾಮಾನ್ಯ ಜನರ ಗತಿಯೇನು?' ಎಂದು ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

