ರಾಯಚೂರು : ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಅವರ 'ದಡ ಸೇರಿಸು ತಂದೆ' ಕಥಾ ಸಂಕಲನಕ್ಕೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಜಯಲಲಿತ ಮತ್ತು ಸಹನಾ ಕಾಂತಬೈಲು ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
2025ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಗಾಗಿ ಜ.30ರಂದು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಪ್ರತಿಷ್ಠಿತ ಪ್ರಶಸ್ತಿಯು 1,00,000 ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಅಮರೇಶ ನುಗಡೋಣಿ ಅವರು ಮಾನ್ವಿ ತಾಲೂಕಿನ ನುಗಡೋಣಿ ಗ್ರಾಮದವರು ಆಗಿದ್ದು, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಅನೇಕ ಕಥೆಗಳು ಮತ್ತು ಕೃತಿಗಳು ಜನಪ್ರಿಯವಾಗಿದ್ದು, ಪ್ರಮುಖ ಕೃತಿಗಳಲ್ಲಿ 'ನೀನು ಅವರ ಪರಿಸರ' (ಕವನ ಸಂಕಲನ), 'ಮಣ್ಣು ಸೇರಿತು ಬೀಜ' (ಕಥಾ ಸಂಕಲನ), 'ಅರಿವು - ನವಸಾಕ್ಷರರಿಗಾಗಿ' (ಕಥೆಗಳು) ಮತ್ತು 'ನುಡಿವ ಬಡಗು' (ತತ್ವಪದ ಸಾಹಿತ್ಯ ಅಧ್ಯಯನ) ಪ್ರಮುಖವಾಗಿವೆ.

