ಶ್ರೀನಗರ: ಕೇಂದ್ರ ಸರ್ಕಾರ ಮತ್ತು ಲಡಾಖ್ನ ನಾಗರಿಕ ಸಮಾಜ ಗುಂಪುಗಳ ನಡುವೆ ಮೇ 22ರಂದು ಮಾತುಕತೆ ಪುನರಾರಂಭ ಆಗಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಭಾನುವಾರ ಘೋಷಿಸಿದರು.
ಕೇಂದ್ರಾಡಳಿತ ಪ್ರದೇಶದ ರಾಜಕೀಯ ಭವಿಷ್ಯದ ಕುರಿತು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಂವಾದ ಪ್ರಕ್ರಿಯೆಗೆ ಈ ಮೂಲಕ ಮತ್ತೆ ಚಾಲನೆ ದೊರೆಯಲಿದೆ.
ಫೆಬ್ರುವರಿ ಆರಂಭದಲ್ಲಿ ನಡೆದಿದ್ದ ಮಾತುಕತೆ ವಿಫಲವಾಗಿತ್ತು. ಆ ನಂತರ ಯಾವುದೇ ಮಾತುಕತೆಗಳು ನಡೆದಿರಲಿಲ್ಲ.
ಲಡಾಖ್ಗೆ ರಾಜ್ಯ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸುವ ಆಂದೋಲನವನ್ನು ಮುನ್ನಡೆಸುತ್ತಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ನಿಯೋಗದ (ಎಲ್ಎಬಿ) ಜತೆ ಇದೀಗ ಗೃಹ ಸಚಿವಾಲಯ ಮಟ್ಟದಲ್ಲಿ ಮಾತುಕತೆ ನಡೆಯಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಲಡಾಖ್ ಭೇಟಿಗೂ ಕೆಲ ದಿನ ಮುನ್ನ ಈ ಘೋಷಣೆ ಹೊರಬಿದ್ದಿದೆ.
ಲಡಾಖ್ಗೆ ರಾಜ್ಯದ ಸ್ಥಾನಮಾನ, 6ನೇ ಶೆಡ್ಯೂಲ್ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ, ಪ್ರತ್ಯೇಕ ಲೋಕಸೇವಾ ಆಯೋಗ, ಲೇಹ್ ಮತ್ತು ಕಾರ್ಗಿಲ್ಗೆ ಪ್ರತ್ಯೇಕ ಸಂಸದೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬುದು ಎಲ್ಎಬಿ ಮತ್ತು ಕೆಡಿಎ ಪ್ರಮುಖ ಬೇಡಿಕೆಗಳಾಗಿವೆ.
ಲಡಾಖ್ನ ಜನರ ಪರಿಸರ, ಭೂ ಹಕ್ಕುಗಳು, ಉದ್ಯೋಗಾವಕಾಶ ಮತ್ತು ಸಾಂಸ್ಕೃತಿಕ ಗುರುತನ್ನು ರಕ್ಷಿಸಲು ಈ ಕ್ರಮಗಳು ಅಗತ್ಯ ಎಂಬುದು ಕೆಡಿಎ ಮತ್ತು ಎಲ್ಎಬಿ ಪ್ರತಿನಿಧಿಗಳ ಪ್ರತಿಪಾದನೆಯಾಗಿದೆ.
ಚೀನಾ ಮತ್ತು ಪಾಕಿಸ್ತಾನದ ಜತೆ ಗಡಿ ಹಂಚಿಕೊಂಡಿರುವ ಲಡಾಖ್ನಲ್ಲಿ ಸ್ಥಳೀಯ ಆಕಾಂಕ್ಷೆಗಳಿಗೆ ಒತ್ತು ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಮಾತುಕತೆಗೆ ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

