ಚೆನ್ನೈ: ತಮಿಳುನಾಡು ವಿಧಾನ ಸಭೆಗೆ ಗುರುವಾರ ಮತದಾನ ನಡೆಯಲಿದ್ದು, ರಾಜ್ಯಾದ್ಯಂತ 5.67 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಒಟ್ಟು 33,133 ಕೇಂದ್ರಗಳಲ್ಲಿ 75,064 ಮತಗಟ್ಟೆಗಳಿದ್ದು, 3 ಲಕ್ಷಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ 8,300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ರಾಜ್ಯಾದ್ಯಂತ ಸುಗಮ ಮತ್ತು ಸುರಕ್ಷಿತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಅಭೂತಪೂರ್ವ ವ್ಯವಸ್ಥೆಗಳನ್ನು ಮಾಡಿದೆ. ಹಲವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ನಿಯಂತ್ರಣ ಘಟಕಗಳು ಮತ್ತು ವಿವಿಪಿಎಟಿ ಯಂತ್ರಗಳ ಜೊತೆಗೆ 1.06 ಲಕ್ಷಕ್ಕೂ ಹೆಚ್ಚು ಬ್ಯಾಲೆಟ್ ಯೂನಿಟ್ಗಳನ್ನು ಸ್ಥಾಪಿಸಲಾಗಿದ್ದು, ಆಕಸ್ಮಿಕ ಘಟನೆಗಳನ್ನು ನಿಭಾಯಿಸಲು ಹೆಚ್ಚುವರಿಯಾಗಿ ಶೇಕಡಾ 20-30 ರಷ್ಟು ಬೆಂಬಲ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟು 5,67,07,380 ಮತದಾರರಲ್ಲಿ 2,89,60,838 ಮಹಿಳೆಯರು ಮತ್ತು 2,77,38,925 ಪುರುಷರು ಇದ್ದು, 14.5 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಅಂಚೆ ಮತದಾನದಲ್ಲಿ ಈವರೆಗೆ 4,18,541 ಮತಗಳನ್ನು ಸ್ವೀಕರಿಸಲಾಗಿದೆ.
5,049 ಮತಗಟ್ಟೆಗಳಲ್ಲಿ 3,025 ಮತಗಟ್ಟೆಗಳನ್ನು ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ನಾಲ್ಕು ಹಂತದ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಸಹಾಯವಾಣಿ, ಪ್ರತ್ಯೇಕ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಮತದಾರರ ಅನುಭವ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸಲು 249 ಮಾದರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸದಾಗಿ ಹಸಿರು ಮತಗಟ್ಟೆಗಳನ್ನು ಪರಿಚಯಿಸಲಾಗಿದೆ.
543 ಕೋಟಿ ರೂ. ನಗದು ವಶಕ್ಕೆ
ಚುನಾವಣಾ ಅಕ್ರಮಗಳ ವಿರುದ್ಧ ನಡೆಸಲಾದ ಪ್ರಮುಖ ಕಾರ್ಯಾಚರಣೆಯಲ್ಲಿ 1,262 ಕೋಟಿ ರೂ. ಮೌಲ್ಯದ ದಾಖಲೆಗಳು, 543 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಚುನಾವಣಾ ನಿಯಮಗಳ ಉಲ್ಲಂಘನೆಗಳಿಗಾಗಿ 2,180 ಕ್ಕೂ ಹೆಚ್ಚು ಆನ್ಲೈನ್ ಲಿಂಕ್ಗಳನ್ನು ನಿರ್ಬಂಧಿಸಲಾಗಿದೆ. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಭಾಗವಾಗಿ ಸುಮಾರು 70 ಲಕ್ಷ ಹೆಸರುಗಳನ್ನು ಅಳಿಸಿ ಹಾಕಲಾಗಿದೆ.
ಕಣದಲ್ಲಿರುವ ಪಕ್ಷಗಳು
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಸತತ ಎರಡನೇ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಜೆ. ಜಯಲಲಿತಾ ಅವರ ನಿಧನದ ಬಳಿಕ ಸತತ ಮೂರು ಬಾರಿ ಸೋತಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಮತ್ತೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಕಣಕ್ಕೆ ಇಳಿದಿದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದರೆ, ನಾಮ್ ತಮಿಳರ್ ಕಚ್ಚಿಯ ಸೀಮನ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಸ್. ರಾಮದಾಸ್ ಅವರು ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆ.

