ನವದೆಹಲಿ: ಮ್ಯಾಚ್ಮೇಕರ್ (ಮದುವೆ ದಲ್ಲಾಳಿ) ಒಬ್ಬರು ಹಂಚಿಕೊಂಡ ಪೋಸ್ಟ್ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 37 ವರ್ಷದ ವಿಚ್ಛೇದಿತ ವ್ಯಕ್ತಿಯೊಬ್ಬ ಮದುವೆಗಾಗಿ ವಧುವನ್ನು ಹುಡುಕುವ ವೇಳೆ ಮುಂದಿಟ್ಟ ಬೇಡಿಕೆಗಳನ್ನು ಅವರು ಬಹಿರಂಗಪಡಿಸಿದ್ದಾರೆ.
ಐಐಟಿ ಪದವೀಧರನಾಗಿರುವ ಹಾಗೂ ಬಿಲಿಯನ್ ಡಾಲರ್ ಕಂಪನಿಯ ನಿರ್ದೇಶಕನಾಗಿರುವ ಆ ವ್ಯಕ್ತಿ 30 ವರ್ಷದೊಳಗಿನ ಬ್ರಾಹ್ಮಣ ಕನ್ಯೆ ಬೇಕಾಗಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ತಾನು ವಿಚ್ಛೇದಿತನಾಗಿದ್ದರೂ ಮರು ಮದುವೆಗೆ ಯುವತಿಗೆ ಅದೇ ಮೊದಲ ಮದುವೆಯಾಗಿರಬೇಕು. ಅಂದರೆ ತನಗೆ ಕನ್ಯೆಯೇ ಬೇಕು ಎಂಬುದು ಆತನ ಬೇಡಿಕೆಯಂತೆ.
ಈ ವಿಚಾರವನ್ನು ಮ್ಯಾಚ್ಮೇಕರ್ ಹಾಗೂ ಡೇಟಿಂಗ್ ಕೋಚ್ ಓಂಡ್ರಿಲಾ ಕಪೂರ್ ಹಂಚಿಕೊಂಡಿದ್ದು, ಆ ವ್ಯಕ್ತಿಯ ಪುರುಷ ಪ್ರಧಾನ ಮನಸ್ಥಿತಿ ಹಾಗೂ ಅಸಂಬದ್ಧ ನಿರೀಕ್ಷೆಗಳ ಕಾರಣದಿಂದ ತಾವು ಕನ್ಯೆ ಹುಡುಕುತ್ತಿಲ್ಲ ಎಂದು ತಿಳಿಸಿದ್ದಾರೆ.
ಓಂಡ್ರಿಲಾ ಕಪೂರ್ ಹೇಳಿಕೆ:
ಓಂಡ್ರಿಲಾ ಅವರ ಪ್ರಕಾರ, ಆ ವ್ಯಕ್ತಿ ತನ್ನನ್ನು ತಾನು 37 ವರ್ಷದ ವಿಚ್ಛೇದಿತ ಎಂದು ಪರಿಚಯಿಸಿಕೊಂಡಿದ್ದು, ತಾನು ಉನ್ನತ ಶೈಕ್ಷಣಿಕ ಹಿನ್ನೆಲೆ ಮತ್ತು ಯಶಸ್ವಿ ಕಾರ್ಪೊರೇಟ್ ವೃತ್ತಿ ಜೀವನವನ್ನು ಹೊಂದಿರುವುದಾಗಿ ತಿಳಿಸಿದ್ದಾನೆ. ಆದರೆ ಅದಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರೂ, ತನ್ನ ಪತ್ನಿಯಾಗಿ ಬರುವವಳು ಕನ್ಯೆಯಾಗಿರಬೇಕು. ಯಾವುದೇ ಪ್ರೇಮ ಸಂಬಂಧವಿರಬಾರದು, ಅಲ್ಲದೆ ಮದುವೆಗೂ ಮುನ್ನವೇ ಲೈಂಗಿಕ ಸಂಬಂಧವನ್ನು ಹೊಂದಿರಬಾರದು ಎಂಬ ಷರತ್ತುಗಳನ್ನು ತಿಳಿಸಿದ್ದಾಗಿ ಆಕೆ ಹೇಳಿದ್ದಾರೆ.
ಆ ವ್ಯಕ್ತಿ ತಾನು ವಿಚ್ಛೇದಿತನಾಗಿದ್ದರೂ ಸಂಗಾತಿಗೆ ಮಾತ್ರ ಇಂತಹ ಕಠಿಣ ಮಾನದಂಡಗಳನ್ನು ವಿಧಿಸಿದ್ದಾನೆ. ಅದರಲ್ಲೂ 30 ವರ್ಷದೊಳಗಿನ ಬ್ರಾಹ್ಮಣ ಸಮುದಾಯದ ಕನ್ಯೆಯನ್ನು ಬಯಸುತ್ತಿರುವಾಗಿ ಕಪೂರ್ ಹೇಳಿದ್ದಾರೆ. ನಿಮಗೂ ಈ ನಿಯಮ ಅನ್ವಯವಾಗುದಿಲ್ಲವೆ ಎಂಬ ಪ್ರಶ್ನೆಗೆ ತಾನು ಪುರುಷ ಎಂದು ಉತ್ತರಿಸಿದ್ದಾನಂತೆ.
ತನ್ನ ಬೇಡಿಕೆಗಳನ್ನು ಸಮರ್ಥಿಸಿಕೊಂಡ ಆ ವ್ಯಕ್ತಿ, ಮದುವೆಗೂ ಮುಂಚೆ ಪರಪುರುಷರೊಂದಿಗೆ ಸಂಬಂಧ ಹೊಂದಿದ್ದರೆ, ಭವಿಷ್ಯದಲ್ಲಿ ಪತಿ ಜತೆ ನಿಷ್ಠೆ ಹೊಂದಿರುವುದಿಲ್ಲ ಎಂದು ಆತ ಹೇಳಿದ್ದಾನೆ. ಅವನು ಹೇಳಿದ ಎಲ್ಲ ಮಾನದಂಡಗಳಿಗೆ ಸರಿಹೊಂದುವ ಹುಡುಗಿ ಇದ್ದರೂ ಇರಬಹುದು. ಆದರೆ ಅಂತಹ ಕನ್ಯೆ ಸಾಮಾನ್ಯವಾಗಿ ಸಂಪ್ರದಾಯಬದ್ಧ ಕುಟುಂಬದಿಂದ ಬಂದಿರಬಹುದು. ಅಂಥ ಕುಟುಂಬವು 37 ವರ್ಷದ ವಿಚ್ಛೇದಿತ ವ್ಯಕ್ತಿಯನ್ನು ಸೂಕ್ತ ವರನಾಗಿ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಕಪೂರ್ ವಿವರಿಸಿದ್ದಾರೆ.
ಆ ವ್ಯಕ್ತಿ ತನ್ನ ಮಾನದಂಡಗಳಿಗೆ ಹೊಂದುವ ಯುವತಿಯರಿಂದ ಈಗಾಗಲೇ ಪ್ರಸ್ತಾವನೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾನೆ. ಮ್ಯಾಟ್ರಿಮೋನಿ ವೆಬ್ಸೈಟ್ಗಳ ಮೇಲೆ ನಂಬಿಕೆ ಇಲ್ಲದ ಕಾರಣ, ಮ್ಯಾಚ್ಮೇಕರ್ ಆಗಿರುವ ಕಪೂರ್ ಅವರನ್ನು ಸಂಪರ್ಕಿಸಿರುವುದಾಗಿ ಆತ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ಆತನ ವಿವರಣೆಯಿಂದ ತೃಪ್ತಿಯಾಗದ ಓಂಡ್ರಿಲಾ ಕಪೂರ್, ಇದರಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಅತಿಯಾದ ಸಂಪ್ರದಾಯಪರ, ಪಿತೃಸತ್ತಾತ್ಮಕ ಮನೋಭಾವ ಮತ್ತು ಸಂಪೂರ್ಣ ಅಸಾಧ್ಯವಾದ ಮಾನದಂಡ ಹೊಂದಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ʼʼನೀನೇ ಈ ಮಹಿಳೆಯರನ್ನು ವಂಚಿಸಬಹುದು ಎಂದು ನನಗೆ ಅನಿಸುತ್ತಿದೆʼʼ ಎಂಬುದಾಗಿ ತಿಳಿಸಿದ್ದಾರೆ.
ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಹೇಳಿಕೆ ಸಮಾಜದಲ್ಲಿ ಇರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

