ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಕೆಲವು ವೆಬ್ ನ್ಯೂಸ್ ಚಾನೆಲ್ಗಳು ಪ್ರಕಟಿಸಿರುವ “ಎನ್ಡಿಎ ಅಭ್ಯರ್ಥಿಗೆ ಕನ್ನಡ ಪತ್ರಕರ್ತರ ಬೆಂಬಲ” ಎಂಬ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾದುದು ಹಾಗೂ ಅಸಂಬದ್ಧ ಎಮದು ಸ್ಪಷ್ಟಪಡಿಸಲಾಗುತ್ತಿದೆ.
ಬದಿಯಡ್ಕದ ಮನುಕುಲ ಅಪಾರ್ಟ್ಮೆಂಟ್ ಸಭಾಂಗಣದಲ್ಲಿ ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರೊಂದಿಗೆ ನಡೆದದ್ದು ಕೇವಲ “ಸಂವಾದ ಕಾರ್ಯಕ್ರಮ” ಮಾತ್ರವಾಗಿದ್ದು, ನಮ್ಮ ಸಂಘದ ವತಿಯಿಂದ ಯಾವುದೇ ರೀತಿಯ ಬೆಂಬಲ ಘೋಷಣೆ ಮಾಡಲಾಗಿಲ್ಲ. ಕಾರ್ಯಕ್ರಮಕ್ಕೆ ಹಾಜರಾದ ಪತ್ರಕರ್ತರು ತಮ್ಮ ವೃತ್ತಿಪರ ಜವಾಬ್ದಾರಿಯ ಭಾಗವಾಗಿ ಪ್ರಶ್ನೆಗಳು ಕೇಳಿದ್ದು ಹೊರತು, ಯಾವುದೇ ರಾಜಕೀಯ ನಿಲುವು ವ್ಯಕ್ತಪಡಿಸಿರುವುದಿಲ್ಲ.
ಆದಾಗ್ಯೂ, ಗಡಿನಾಡು ಡಾಟ್ ಇನ್ ಹಾಗೂ ನಮ್ಮ ಮಂಜೇಶ್ವರ ಡಾಟ್ ಕಾಮ್ ವೆಬ್ ಚಾನೆಲ್ಗಳು ನಮ್ಮ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಂಡು ತಪ್ಪು ಮಾಹಿತಿ ಹರಡಿರುವುದು ಅತ್ಯಂತ ಖಂಡನೀಯ. ಪತ್ರಕರ್ತರ ಸಂಘದ ತಟಸ್ಥತೆ ಹಾಗೂ ನೈತಿಕ ಮೌಲ್ಯಗಳಿಗೆ ಧಕ್ಕೆಯುಂಟು ಮಾಡುವ ಇಂತಹ ವರ್ತನೆಗಳನ್ನು ನಾವು ಸಹಿಸಲಾಗುವುದಿಲ್ಲ.
ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ನಮ್ಮ ಸಂಘದ ವಿಶ್ವಾಸಾರ್ಹತೆಗೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಮಾಧ್ಯಮಗಳು ತಕ್ಷಣವೇ ಈ ಸುಳ್ಳು ಸುದ್ದಿಯನ್ನು ಹಿಂಪಡೆಯಬೇಕು ಹಾಗೂ ಸಾರ್ವಜನಿಕರ ಮುಂದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ನಮ್ಮ ಸಂಘದ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರಲ್ಲಿ ನಾವು ಹಿಂದೇಟು ಹಾಕುವುದಿಲ್ಲ ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

