ಗಂಡಾಬೊಯನಪಲ್ಲಿ: ಟೋಲ್ ಪ್ಲಾಜಾದಲ್ಲಿ ಆಡಳಿತಾರೂಢ ಟಿಡಿಪಿ ಶಾಸಕನೊಬ್ಬನ ಬೆಂಬಲಿಗರು ಭಾರಿ ಗುಂಡಾಗಿರಿ ಮೆರೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಏಪ್ರಿಲ್ 25 ರಂದು ಅಣ್ಣಮ್ಮಯ್ಯ ಜಿಲ್ಲೆಯ ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಟಿಡಿಪಿ ಶಾಸಕ ಸುರೇಂದ್ರ ಬಾಬು ಅವರು ತಿರುಪತಿಯಿಂದ ಕಲ್ಯಾಣದುರ್ಗಕ್ಕೆ ತೆರಳುತ್ತಿದ್ದರು.
ಈ ವೇಳೆ ತಿರುಪತಿ-ಮದನಪಲ್ಲಿ ಹೆದ್ದಾರಿಯ ಗಂಡಾಬೊಯನಪಲ್ಲಿ ಬಳಿ ಇರುವ ಟೋಲ್ ಪ್ಲಾಜಾವನ್ನು ಬೆಳಿಗ್ಗೆ 9.25ಕ್ಕೆ ಸುರೇಂದ್ರ ಬಾಬು ಅವರು ಕಾರಿನ ಮೂಲಕ ಪಾಸಾಗುತ್ತಿದ್ದರು. ಅವರ ಜೊತೆ ಭದ್ರತಾ ಸಿಬ್ಬಂದಿ, ಕೆಲ ಬೆಂಬಲಿಗರು ಇದ್ದರು.
ಟೋಲ್ ಪ್ಲಾಜಾದಲ್ಲಿ ಸುರೇಂದ್ರ ಬಾಬು ಕಾರಿನ ಮುಂದೆ ಇನ್ನೂ ಎರಡೂ ವಾಹನಗಳು ಆನ್ಲೈನ್ ಪೇಮೆಂಟ್ ವಿಚಾರವಾಗಿ ವಿಳಂಬ ಅನುಭವಿಸಿದ್ದವು. ಇದರಿಂದ ಕುಪಿತಗೊಂಡ ಸುರೇಂದ್ರ ಬಾಬು ಬೆಂಬಲಿಗರು ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಹೊರಎಳೆದು ಜಗಳ ತೆಗೆದಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಬೆಂಬಲಿಗರು ಟೋಲ್ನ ಮ್ಯಾನೇಜರ್, ಇಬ್ಬರು ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ಕೂದಲು ಹಿಡಿದು ಎಳೆದಿದ್ದಾರೆ. ಗಂಭೀರವಾಗಿ ಹಲ್ಲೆ ಮಾಡಿ ಭಾರಿ ಗುಂಡಾಗಿರಿ ಮೆರೆದಿದ್ದಾರೆ. ಅಲ್ಲದೇ ಮ್ಯಾನೇಜರ್ನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ.
ಈ ಘಟನೆ ಟೋಲ್ನ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು ಆಂಧ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆಡಳಿತಾಡೂಢ ಟಿಡಿಪಿ ಶಾಸಕರು ಹಾಗೂ ಅವರ ಬೆಂಬಲಿಗರ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಶಾಸಕ ಸುರೇಂದ್ರ ಬಾಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

