ನವದೆಹಲಿ: ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 124ಎ ಕುರಿತು ಆರೋಪಿಗೆ ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ನ್ಯಾಯಾಲಯಗಳು ವಿಚಾರಣೆ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 17 ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಯೊಬ್ಬರ ಅರ್ಜಿ ಆಲಿಸುವಾಗ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ ಈ ಕುರಿತು ಸ್ಪಷ್ಟೀಕರಣ ನೀಡಿತು.
ಅರ್ಜಿದಾರರು ಸೆಕ್ಷನ್ 124ಎ ಅಡಿಯಲ್ಲಿನ ಆರೋಪಗಳು ಸೇರಿದಂತೆ ತನ್ನ ಮೇಲಿನ ಕ್ರಿಮಿನಲ್ ಮೇಲ್ಮನವಿಯನ್ನುಪೂರ್ಣವಾಗಿ ಆಲಿಸಿದರೆ ಯಾವುದೇ ಅಭ್ಯಂತರವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೀಠ ಹೇಳಿದೆ.
ಆರೋಪಿಗೆ ಯಾವುದೇ ಆಕ್ಷೇಪಣೆ ಇಲ್ಲದಿರುವಾಗ, ನ್ಯಾಯಾಲಯಗಳು ಅರ್ಹತೆಗಳ ಆಧಾರದ ಮೇಲೆ ಮತ್ತು ಕಾನೂನಿನ ಪ್ರಕಾರ ಇಂತಹ ವಿಷಯಗಳನ್ನು ನಿರ್ಧರಿಸಲು ಯಾವುದೇ ಅಡ್ಡಿ ಇರುವುದಿಲ್ಲ ಪೀಠ ಹೇಳಿದೆ.
ಆರೋಪಿಯ ಮೇಲ್ಮನವಿ ಮಧ್ಯ ಪ್ರದೇಶದ ಹೈಕೋರ್ಟ್ನಲ್ಲಿ ಬಾಕಿಯಿದೆ. ಅದನ್ನು ಅರ್ಹತೆ ಆಧಾರದ ಮೇಲೆ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ ಹೈಕೋರ್ಟ್ಗೆ ಸೂಚಿಸಿದೆ.
ವಸಾಹತುಶಾಹಿ ಅವಧಿಯ ದೇಶದ್ರೋಹ ಕಾಯ್ದೆ ಕುರಿತು ಕೇಂದ್ರ ಸರ್ಕಾರವು ತನ್ನ ಭರವಸೆಯ ಪರಿಶೀಲನೆ ಯನ್ನು ಪೂರ್ಣಗೊಳಿಸುವವರೆಗೆ ದೇಶದ್ರೋಹದ ಮೇಲಿನ ದಂಡದ ನಿಬಂಧನೆಯನ್ನು ಸುಪ್ರೀಂ ಕೋರ್ಟ್ 2022ರ ಮೇ ತಿಂಗಳಲ್ಲಿ ತಡೆಹಿಡಿದಿತ್ತು. ಈ ಅಪರಾಧವನ್ನು ಪ್ರಚೋದಿಸುವ ಯಾವುದೇ ಹೊಸ ಪ್ರಕರಣವನ್ನು ದಾಖಲಿಸದಂತೆ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತ್ತು.

