ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶೀಘ್ರದಲ್ಲೇ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, ಆಗ ಕಾಂಗ್ರೆಸ್ನ ಇಬ್ಬರು ಶಾಸಕರು ಸಚಿವರಾಗಲಿದ್ದಾರೆ.
1967ರ ನಂತರ ತಮಿಳುನಾಡಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ಅಧಿಕಾರ ಅನುಭವಿಸುವ ಯೋಗ ಒದಗಿಬಂದಿದೆ.
'59 ವರ್ಷಗಳ ನಂತರ ಇಬ್ಬರು ಕಾಂಗ್ರೆಸ್ ಸಚಿವರು ತಮಿಳುನಾಡು ಸರ್ಕಾರದ ಭಾಗವಾಗಲಿದ್ದಾರೆ. ನನ್ನಂತಹ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಭಾವನಾತ್ಮಕ ಮತ್ತು ಮಹತ್ವದ ಕ್ಷಣವಾಗಿದೆ' ಎಂದು ಲೋಕಸಭೆಯ ಕಾಂಗ್ರೆಸ್ನ ಉಪ ಮುಖ್ಯ ಸಚೇತಕ ಮಾಣಿಕ್ಕಂ ಟ್ಯಾಗೋರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
'ತಮಿಳುನಾಡು ಮೈತ್ರಿ ಸರ್ಕಾರವನ್ನು ಒಪ್ಪುವುದಿಲ್ಲ ಎಂದು ಡಿಎಂಕೆ ಬಹಿರಂಗವಾಗಿ ಘೋಷಿಸಿತ್ತು. ಆದರೆ, ಜನರು ಈಗಾಗಲೇ ಈ ಬಗ್ಗೆ ತೀರ್ಪು ನೀಡಿದ್ದಾರೆ. ಮೈತ್ರಿ ಪಕ್ಷಗಳಿಗೆ ಅಧಿಕಾರದಲ್ಲಿ ಪಾಲು ನೀಡಲಾಗುವುದು ಎಂದು ಹೇಳಿದ್ದ ವಿಜಯ್ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ' ಎಂದು ಟ್ಯಾಗೋರ್ ಹೇಳಿದ್ದಾರೆ.
'ಮೇ 10ರಂದು ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೇ ಕಾಂಗ್ರೆಸ್ನ ಶಾಸಕರ ಹೆಸರು ಕೊಡುವಂತೆ ಕೋರಿದ್ದರು. ಆದರೆ, ನಿಗದಿತ ಸಮಯದೊಳಗೆ ಹೆಸರನ್ನು ತಿಳಿಸದಿದ್ದರಿಂದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಅವಕಾಶ 'ಕೈ'ತಪ್ಪಿತು' ಎನ್ನಲಾಗಿದೆ.
ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ದಲಿತ ನಾಯಕ ಪಿ. ವಿಶ್ವನಾಥನ್ ಮತ್ತು ಸಿಎಲ್ಪಿ ನಾಯಕ ರಾಜೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಸಚಿವರನ್ನಾಗಿ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಟಿವಿಕೆಯು ಶಾಸಕಿಯರನ್ನು ಸಚಿವರನ್ನಾಗಿಸುವಂತೆ ಕೋರಿದರೆ, ಕಾಂಗ್ರೆಸ್ನ ಏಕೈಕ ಶಾಸಕಿ, ಕೊಲಾಚೆಲ್ ಕ್ಷೇತ್ರದ ತಾರಹೈ ಕತ್ಬರ್ಟ್ ಅವರಿಗೆ ಅವಕಾಶ ದೊರೆಯಲಿದೆ ಎನ್ನಲಾಗಿದೆ.
2006ರಲ್ಲಿ ಡಿಎಂಕೆ ಸರ್ಕಾರವು ಆಡಳಿತ ನಡೆಸಲು ಕಾಂಗ್ರೆಸ್ ಶಾಸಕರ ಮೇಲೆ ಅವಲಂಬಿತವಾಗಿದ್ದರೂ, ಮೈತ್ರಿ ಸರ್ಕಾರ ರಚಿಸುವಂತೆ ಒತ್ತಡ ಹೇರುವ ಅವಕಾಶವನ್ನು ಕಾಂಗ್ರೆಸ್ ಕೈಚೆಲ್ಲಿತ್ತು.

