ಭೋಪಾಲ್: ಮಧ್ಯಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ 33 ವರ್ಷದ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಿ ಇಂದು (ಬುಧವಾರ) ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಟ್ವಿಶಾ ಕುಟುಂಬದವರಿಗೆ ಸಿಎಂ ಮೋಹನ್ ಯಾದವ್ ಈ ಭರವಸೆ ನೀಡಿದ್ದಾರೆ.
ಪ್ರಕರಣದ ಗಂಭೀರತೆ, ಟ್ವಿಶಾ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐಗೆ ಸರ್ಕಾರದಿಂದ ಅಧಿಕೃತ ಪತ್ರ ಬರೆಯಲಾಗುವುದು ಎಂದರು. ಹಾಗೂ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಕಾನೂನು ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ
ಕುಟುಂಬಸ್ಥರು ಬಯಸಿದರೆ ಟ್ವಿಶಾ ಮೃತದೇಹವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸರ್ಕಾರವೇ ಸಾರಿಗೆ ವ್ಯವಸ್ಥೆ ಮಾಡಲಿದೆ. ಆದರೆ ಎರಡನೇ ಮರಣೋತ್ತರ ಪರೀಕ್ಷೆಯ ಅಂತಿಮ ನಿರ್ಧಾರ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮೋಹನ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಟ್ವಿಶಾ ಅವರು 'ಮಿಸ್ ಪುಣೆ' ಕಿರೀಟ ಧರಿಸಿದ್ದರು. ಜೊತೆಗೆ, ತೆಲುಗಿನ ಸಿನಿಮಾವೊಂದರಲ್ಲಿಯೂ ನಟಿಸಿದ್ದರು. ಟ್ವಿಶಾ ಪತಿ ಸಮರ್ಥ್ ಸಿಂಗ್ ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು 2018ರಿಂದಲೂ ವಕೀಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ವಕೀಲ ಸಮರ್ಥ್ ಸಿಂಗ್ ಅವರೊಂದಿಗೆ ಮದುವೆಯಾಗಿ ಕೇವಲ ಐದೇ ತಿಂಗಳಿಗೆ ಟ್ವಿಶಾ ಶರ್ಮಾ ಅತ್ತೆ ಮನೆಯ ಟೆರೇಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಸ್ಥಳೀಯ ಪೊಲೀಸರು ಇದನ್ನು ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣ ಎಂದು ಹೇಳಿದ್ದಾರೆ. ಆದರೆ ಟ್ವಿಶಾ ಪೋಷಕರು ಇದು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಳಿಯ ಸಮರ್ಥ್ ಸಿಂಗ್ ಹಾಗೂ ಆತನ ಕುಟುಂಬದವರು ವರದಕ್ಷಿಣೆಗಾಗಿ ಟ್ವಿಶಾಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಟ್ವಿಶಾ ಪತಿ, ವಕೀಲ ಸಮರ್ಥ್ ಸಿಂಗ್ ಹಾಗೂ ಆತನ ತಾಯಿ ಗಿರಿಬಾಲಾ ಸಿಂಗ್ (ನಿವೃತ್ತ ನ್ಯಾಯಾಧೀಶರು) ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಸದ್ಯ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದೇ ವೇಳೆ, ತಲೆಮರೆಸಿಕೊಂಡಿರುವ ಸಮರ್ಥ್ ಸಿಂಗ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಟ್ವಿಶಾ ಶರ್ಮಾ ತೀವ್ರ ಮಾದಕ ವ್ಯಸನಿಯಾಗಿದ್ದರು ಹಾಗೂ ಆಕೆಗೆ 'ಸ್ಕಿಜೋಫ್ರೇನಿಯಾ' ಎಂಬ ಮಾನಸಿಕ ಕಾಯಿಲೆ ಇತ್ತು ಎಂದು ಹೇಳಿದ್ದಾರೆ. ಸದ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುತ್ತಿರುವುದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

