ನವದೆಹಲಿ : ₹200 ಕೋಟಿ ಮೊತ್ತದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮ್ಮ ವಿರುದ್ಧ ದೋಷಾರೋಪ ನಿಗದಿಪಡಿಸಲು ದೆಹಲಿ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಕಾನೂನಿನ ಹೋರಾಟ ಮುಂದುವರಿಸುವುದಾಗಿ ತಿಳಿಸಿ, ಪ್ರಸ್ತುತ ವಿಶೇಷ ಮೇಲ್ಮನವಿ ಅರ್ಜಿಯನ್ನು ಹಿಂಪಡೆಯಲು ಜಾಕ್ವೆಲಿನ್ ಅವರ ವಕೀಲರು ಕೋರಿದ್ದಾರೆ. ಇದಕ್ಕೆ ಅನುಮತಿ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಜಾಯ್ಮಾಲ್ಯಾ ಬಾಗ್ಚಿ ಅವರಿದ್ದ ಪೀಠವು ಹೇಳಿತು.
ಅನೇಕ ಗಣ್ಯ ವ್ಯಕ್ತಿಗಳಿಗೆ ಒಟ್ಟು ₹200 ಕೋಟಿ ವಂಚನೆ ಎಸಗಿದ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಆರೋಪಿಯಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಸೇರಿದಂತೆ 15 ಜನರ ವಿರುದ್ಧ ಆರೋಪ ನಿಗದಿ ಮಾಡುವಂತೆ ದೆಹಲಿ ನ್ಯಾಯಾಲಯ ಮೇ 30ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಜಾಕ್ವೆಲಿನ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಪ್ರಶಾಂತ್ ಕಿಶೋರ್ ಮಿಶ್ರಾ ಅವರು ಜಾಕ್ವೆಲಿನ್ ಅರ್ಜಿ ವಿಚಾರಣೆ ನಡೆಸುವುದರಿಂದ ಜೂನ್ 11ರಂದು ಹಿಂದೆ ಸರಿದಿದ್ದರು.
ಮತ್ತೊಂದು ಪ್ರಕರಣದಲ್ಲಿ ಸುಕೇಶ್ ಸೇರಿದಂತೆ 20 ಜನರ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಆರೋಪ ನಿಗದಿ ಮಾಡುವಂತೆಯೂ ದೆಹಲಿ ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಬಳಿಕ ಮೊದಲ ಬಾರಿಗೆ ಹೆಚ್ಚುವರಿ ಆರೋಪಪಟ್ಟಿಯಲ್ಲಿ ನಟಿಯ ಹೆಸರನ್ನು ಸೇರಿಸಿತ್ತು.
ಜಾಕ್ವೆಲಿನ್ ಅವರು ಸುಕೇಶ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಹಾಗೂ ಆತನಿಂದ ದುಬಾರಿ ಬೆಲೆಯ ಉಡುಗೊರೆಗಳನ್ನು ಸ್ವೀಕರಿಸಿದ್ದರು ಎಂದು ಆರೋಪಿಸಲಾಗಿದೆ.

