ನವದೆಹಲಿ: ಮಹಿಳೆಯರ ಮನೆಕೆಲಸ-ಆರೈಕೆ ಸೇವೆಗಳ ಮೌಲ್ಯವನ್ನು ಮಾಸಿಕವಾಗಿ ಕನಿಷ್ಠ ₹30,000 ಎಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಮಾನದಂಡ ರೂಪಿಸಿದೆ.
ಮನೆ ಮತ್ತು ಕುಟುಂಬಕ್ಕಾಗಿ ಶ್ರಮಿಸುವ ಮಹಿಳೆಯರನ್ನು ಬರೀ 'ಗೃಹಿಣಿಯರು' ಎನ್ನದೇ 'ರಾಷ್ಟ್ರ ನಿರ್ಮಾರ್ತೃಗಳು' ಎಂದು ಗುರುತಿಸಬೇಕು ಎಂದು ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್.ಕೆ.ಸಿಂಗ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ವಾಹನ ಅಪಘಾತವೊಂದರಲ್ಲಿ ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
'ಮನುಷ್ಯನ ವ್ಯಕ್ತಿಗತ ಬೆಳವಣಿಗೆ ಮತ್ತು ರಾಷ್ಟ್ರದ ಬೆಳವಣಿಗೆ ಎರಡಕ್ಕೂ ಕೊಡುಗೆ ನೀಡುವ ಮೂಲಕ ಗೃಹಿಣಿಯರು ರಾಷ್ಟ್ರ ನಿರ್ಮಾರ್ತೃಗಳಾಗಿರುತ್ತಾರೆ. ಹೀಗಾಗಿ ಗೃಹಿಣಿಯರ ಆಕಸ್ಮಿಕ ಸಾವಿಗೆ ಪರಿಹಾರ ನಿರ್ಧರಿಸುವ ಸಂದರ್ಭದಲ್ಲಿ ಮನೆಯ ಆರೈಕೆ ಕಾರ್ಯದ ನಷ್ಟವನ್ನು ತಿಂಗಳಿಗೆ ಕನಿಷ್ಠ ₹30 ಸಾವಿರ ಎಂದು ಪರಿಗಣಿಸಬೇಕೆಂದು ನಾವು ಮಾನದಂಡ ರೂಪಿಸುತ್ತಿದ್ದೇವೆ' ಎಂದು ಪೀಠ ಹೇಳಿದೆ.
'ಇಡೀ ಮನೆಯ ಕಾರ್ಯವು ಗೃಹಿಣಿಯನ್ನೇ ಅವಲಂಬಿಸಿರುವಾಗ, ಕುಟುಂಬದಲ್ಲಿ ಸಂಪಾದನೆ ಮಾಡುವ ಸದಸ್ಯರ ಮೇಲೆ ಅವಲಂಬಿತಳಾದವಳು ಎಂದು ಆಕೆಯ ಕುರಿತು ಹೇಳುವುದೇ ವಿಪರ್ಯಾಸ. ಕುಟುಂಬದಲ್ಲಿ ಸಂಪಾದಿಸುವ ವ್ಯಕ್ತಿಗಳೆಲ್ಲರೂ ಎಲ್ಲದಕ್ಕೂ ಗೃಹಿಣಿಯ ಮೇಲೆ ಅವಲಂಬಿತರಾಗಿರುತ್ತಾರೆ. ಆದರೂ ಆಕೆಯ ಸೇವೆಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ' ಎಂದೂ ಪೀಠ ಬೇಸರ ವ್ಯಕ್ತಪಡಿಸಿದೆ.
'ಮುಂದಿನ ದಿನಗಳಲ್ಲಾದರೂ 'ಗೃಹಿಣಿ' ಎಂಬ ಪದದ ಬದಲಿಗೆ 'ರಾಷ್ಟ್ರ ನಿರ್ಮಾರ್ತೃ' ಎಂಬ ಪದದಿಂದ ಆಕೆಯನ್ನು ಗುರುತಿಸಬೇಕು ಎಂಬುದು ನಮ್ಮ ನಂಬಿಕೆ' ಎಂದೂ ನ್ಯಾಯಪೀಠ ತಿಳಿಸಿದೆ.
ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡುವಲ್ಲಿ ಆಗಿರುವ ವಿಳಂಬದ ಬಗ್ಗೆಯೂ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇಂಥ ಪ್ರಕರಣಗಳು ಒಂದು ವರ್ಷದ ಒಳಗೇ ಇತ್ಯರ್ಥವಾಗಬೇಕು ಎಂದಿದೆ.
ಏನಿದು ಪ್ರಕರಣ?:
ಪಂಜಾಬ್ನ ವ್ಯಕ್ತಿಯೊಬ್ಬರು 2001ರ ನವೆಂಬರ್ 25ರಂದು ನಡೆದ ಅಪಘಾತದಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡರು. ದಂಪತಿಗೆ ಮೂವರು ಮಕ್ಕಳಿದ್ದು, ತಮ್ಮ ಪತ್ನಿ ಸಾವಿಗೆ ಪರಿಹಾರ ಕೋರಿ ಪತಿ ಮೋಟಾರು ಅಪಘಾತ ಪರಿಹಾರ (ಕ್ಲೇಮ್) ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು.
ನ್ಯಾಯಮಂಡಳಿಯು ಕುಟುಂಬಕ್ಕೆ 2.42 ಲಕ್ಷ ಪರಿಹಾರ ನೀಡಿತ್ತು. ಇದರಿಂದ ನೊಂದ ಪತಿ, ಹೆಚ್ಚಿನ ಪರಿಹಾರ ಕೋರಿ ಹೈಕೋರ್ಟ್ ಮೊರೆಹೋಗಿದ್ದರು. ಶೇ 7.5ರ ಬಡ್ಡಿದರದಲ್ಲಿ ಒಟ್ಟು ₹8.43 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. ಆದಾಗ್ಯೂ ಮತ್ತಷ್ಟು ಹೆಚ್ಚಿನ ಪರಿಹಾರ ಕೋರಿ ಮಹಿಳೆಯ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

