ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಕ್ಷದ್ವೀಪ ಅಬಕಾರಿ ನಿಯಂತ್ರಣ 2026 ಕ್ಕೆ ಸಹಿ ಹಾಕಿ ಕಾನೂನಾಗಿಸಿದ್ದಾರೆ. ಹೊಸ ಶಾಸನವು 1979ರ ಲಕ್ಷದ್ವೀಪ ನಿಷೇಧ ನಿಯಂತ್ರಣ ರದ್ದುಗೊಳಿಸಿದೆ. ಇದು ಮುಸ್ಲಿಂ ಬಹುಸಂಖ್ಯಾತರಿರುವ ದ್ವೀಪಸಮೂಹದಲ್ಲಿ ದಶಕಗಳ ನಿಷೇಧವನ್ನು ಕೊನೆಗೊಳಿಸಿದೆ.
ನಿಷೇಧವನ್ನು ಏಕೆ ತೆಗೆದು ಹಾಕಲಾಗಿದೆ?
ಕೇಂದ್ರ ಸರ್ಕಾರ ಲಕ್ಷದ್ವೀಪವನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಪ್ರಯತ್ನಿಸುತ್ತಿದೆ. ಆಯ್ದ ರೆಸಾರ್ಟ್ಗಳನ್ನು ಮೀರಿ ಇತರ ಆತಿಥ್ಯ ಸಂಸ್ಥೆಗಳಲ್ಲೂ ಅಲ್ಕೋಹಾಲ್ ಯುಕ್ತ ಪಾನೀಯಗಳ ಮಾರಾಟ ಪರವಾನಗಿಯನ್ನು ವಿಸ್ತರಿಸುವುದರಿಂದ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಆಕರ್ಷಿಸಬಹುದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಹೊಸ ನಿಯಮಗಳು ಕೇಂದ್ರಾಡಳಿತ ಪ್ರದೇಶಕ್ಕೆ ಆರ್ಥಿಕ ಆದಾಯದ ಬಾಗಿಲು ತೆರೆಯುತ್ತದೆ. ಆಡಳಿತವು ಪ್ರಾದೇಶಿಕ ಅಭಿವೃದ್ಧಿಗೆ ಹಣಕಾಸು ಒದಗಿಸಲು ಅಬಕಾರಿ ಸುಂಕಗಳು, ಪರವಾಗಿ ಶುಲ್ಕಗಳು ಮತ್ತು ಪ್ರಕ್ರಿಯೆ ಶುಲ್ಕಗಳನ್ನು ವಿಧಿಸಬಹುದು. ಹೊಸ ಕಾನೂನು ಮದ್ಯದ ತಯಾರಿಕೆ, ಆಮದು, ರಫ್ತು, ಸಾಗಾಟ ಮತ್ತು ಮಾರಾಟದ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ರಚನಾತ್ಮಕ, ಕಾನೂನು ವ್ಯವಸ್ಥೆ ತರುವ ಜೊತೆಗೆ ನಿಷೇಧವನ್ನು ಸಂಪೂರ್ಣ ತೆಗೆದು ಹಾಕುತ್ತದೆ.
ಹೊಸ ಚೌಕಟ್ಟು ಏನು ಹೇಳುತ್ತದೆ?
ವರದಿಗಳ ಪ್ರಕಾರ ಹೊಸ ಕಾನೂನುಗಳು ಲಕ್ಷದ್ವೀಪದಲ್ಲಿ ಮದ್ಯ ಮಾರುಕಟ್ಟೆಯ ಮೇಲಿನ ನಿಯಂತ್ರಣ ತೆಗೆದು ಹಾಕುತ್ತಿಲ್ಲ. ಬದಲಾಗಿ ಸರ್ಕಾರಕ್ಕೆ ಹೆಚ್ಚು ನಿಯಂತ್ರಣ ನೀಡುತ್ತದೆ. ಸರ್ಕಾರ ಭಾರೀ ಸುಂಕಗಳನ್ನು ವಿಧಿಸಿದೆ. ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮತ್ತು ಆಮದು ಮಾಡಿಕೊಂಡ ಮದ್ಯದ ಮೇಲೆ ಶೇ 400ರಷ್ಟು ಅಬಕಾರಿ ಸುಂಕ, ಬಿಯರ್ ಮೇಲೆ ಶೇ 200 ಮತ್ತು ವೈನ್ ಮೇಲೆ ಶೇ 80ರಷ್ಟು ಸುಂಕ ವಿಧಿಸಲಾಗಿದೆ. ದಿಲ್ಲಿಯಲ್ಲಿ ಈ ಸುಂಕ ತದ್ವಿರುದ್ಧವಾಗಿದೆ. ದಿಲ್ಲಿಯಲ್ಲಿ IMFL, ಬಿಯರ್, ವೈನ್ ಮತ್ತು ಆಮದು ಮಾಡಿಕೊಂಡ ವಿದೇಶಿ ಮದ್ಯದ ಮೇಲೆ ಶೇ 25ರಷ್ಟು ವ್ಯಾಟ್ ಹೇರಲಾಗುತ್ತದೆ.
ಸರ್ಕಾರಿ ಸ್ವಾಮ್ಯದ ನಿಗಮಗಳು, ಅಧಿಕೃತ ಸಂಸ್ಥೆಗಳು ಮತ್ತು ಆಯ್ದ ಖಾಸಗಿ ಸಂಸ್ಥೆಗಳಿಗೆ ಮಾತ್ರ ಪಾನೀಯ ನಿರ್ವಹಿಸಲು ಅಥವಾ ಚಿಲ್ಲರೆ ಮಾರಾಟ ಮಾಡಲು ಅಧಿಕೃತ ಪರವಾನಗಿ ನೀಡಲಾಗುವುದು. ಅಲ್ಲದೆ 21 ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ದ್ವೀಪದ ಯಾವುದೇ ಭಾಗದಲ್ಲಿ ಸ್ಥಳೀಯ ಮಿತಿ ವಿಧಿಸಲು ಅಥವಾ ನಿಷೇಧ ಮರು ಜಾರಿಗೊಳಿಸಲು ಅಧಿಕಾರ ನೀಡಲಾಗಿದೆ.
ಹೊಸ ಕಾನೂನಿನ ಟೀಕೆಗೆ ಕಾರಣವೇನು?
ಸಂಪೂರ್ಣ ನಿಷೇಧ ತೆಗೆದು ಹಾಕಿರುವ ಕ್ರಮವು ವಿಪಕ್ಷಗಳು ಮತ್ತು ಸ್ಥಳೀಯ ರಂಗಗಳಿಂದ ಟೀಕೆಗೆ ಗುರಿಯಾಗಿದೆ. ದ್ವೀಪಸಮೂಹದಲ್ಲಿ ಶೇ 96.5ರಷ್ಟು ಮುಸ್ಲಿಂ ಜನಸಂಖ್ಯೆ ನೆಲೆಸಿದೆ. ಮದ್ಯ ಸೇವನೆ ನಿಷೇಧಿಸುವ ಇಸ್ಲಾಮಿಕ್ ತತ್ವಗಳನ್ನು ಗೌರವಿಸಲು 1979ರಲ್ಲಿ ಮೂಲ ನಿಷೇಧ ತರಲಾಗಿತ್ತು.
ಮದ್ಯ ನಿಷೇಧ ತಮ್ಮ ಸಾಂಪ್ರದಾಯಿಕ ಸಾಮಾಜಿಕ ರಚನೆ ಮತ್ತು ಜೀವನಶೈಲಿಯನ್ನು ಹಾಳು ಮಾಡುತ್ತದೆ ಎಂದು ಸ್ಥಳೀಯ ಸಂಘಟನೆಗಳು ಹೇಳಿವೆ. ನಾಗರಿಕ ಸಮಾಜದ ಸಂಘಟನೆಗಳು, ಸ್ಥಳೀಯ ನಾಯಕರು ಮತ್ತು ಲಕ್ಷದ್ವೀಪದ ಸಂಸದ ಮುಹಮ್ಮದ್ ಹಮ್ದುಲ್ಲಾ ಸಯೀದ್ ನಿರ್ಧಾರವನ್ನು ವಿರೋಧಿಸಿದ್ದಾರೆ. ಅಲ್ಲದೆ ಮದ್ಯದ ಸುಲಭ ಲಭ್ಯತೆ ಸ್ಥಳೀಯ ಯುವಕರಲ್ಲಿ ಮಾದಕ ವ್ಯಸನ ಹೆಚ್ಚಾಗಲು ಕಾರಣವಾಗಲಿದೆ ಮತ್ತು ದ್ವೀಪದ ಶಾಂತಿಗೆ ಅಡ್ಡಿಯಾಗಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

