ನವದೆಹಲಿ (PTI): 'ಭಾರತ ಹಾಗೂ ಪಾಕಿಸ್ತಾನ ನಡುವಿನ ಬಾಂಧವ್ಯದ ಕುರಿತು ಹೊರದೇಶಗಳಲ್ಲಿ ನಿವೃತ್ತ ರಾಜತಾಂತ್ರಿಕರು ಹಾಗೂ ಸೇನಾ ಅಧಿಕಾರಿಗಳ ಭಾಗವಹಿಸುವ ಸಭೆಯು ಅವರ ವೈಯಕ್ತಿಕ ಸಾಮರ್ಥ್ಯದಲ್ಲಿ ನಡೆಯುತ್ತವೆ. ಭಾರತವು ಇಂತಹ ಚರ್ಚೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ' ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.
ಪ್ರಾದೇಶಿಕ ಭದ್ರತೆ ಕುರಿತಂತೆ ಕೊಲಂಬೊದಲ್ಲಿ ಕಳೆದ ವಾರ ಎರಡನೇ ಹಂತದ ಮಾತುಕತೆ ನಡೆದಿತ್ತು, ಇದರಲ್ಲಿ ಭಾರತ- ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದರು.
'ವೈವಿಧ್ಯ ವಿಚಾರಗಳ ಕುರಿತಂತೆ ಜಗತ್ತಿನ ಹಲವು ಕಡೆಗಳಲ್ಲಿ ಡಜನ್ಗೂ ಅಧಿಕ ಸಭೆಗಳು ನಡೆಯುತ್ತಿರುತ್ತವೆ. ಭಾಗವಹಿಸುವ ನಿವೃತ್ತ ಅಧಿಕಾರಿಗಳು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದರಲ್ಲಿ ಹೊಸತೇನೂ ಇಲ್ಲ, ವಿಶೇಷವೂ ಇಲ್ಲ' ಎಂದು ಸೆಷೆಲ್ಸ್ನ ವಿಕ್ಟೋರಿಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ನಮಗೆ ತಿಳಿದ ಪ್ರಕಾರ ಖಾಸಗಿ ವ್ಯಕ್ತಿಗಳು ಸೇರಿ ಖಾಸಗಿ ಕಾರ್ಯಕ್ರಮ ನಡೆಸಿದ್ದಾರೆ. ಇದು ಅಧಿಕೃತ ಕಾರ್ಯಕ್ರಮವಲ್ಲ' ಎಂದು ಮಿಸ್ರಿ ಸ್ಪಷ್ಟನೆ ನೀಡಿದ್ದಾರೆ.
'ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾಗಿ ನಾನು ಮಾತನಾಡಲು ಸಾಧ್ಯವಿಲ್ಲ. ಭಾರತದ ಪ್ರಕಾರ, ಇದರಲ್ಲಿ ಯಾರೂ ಅಧಿಕೃತವಾಗಿ ಭಾಗಿಯಾಗಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಬೆಂಬಲ ನೀಡುವುದಿಲ್ಲ' ಎಂದು ಹೇಳಿದ್ದಾರೆ.

