ನವದೆಹಲಿ: ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ದೇಣಿಗೆ ದುರುಪಯೋಗ ಪ್ರಕರಣದಲ್ಲಿ 'ಕ್ಲೀನ್ ಚಿಟ್' ನೀಡುವ ಮೂಲಕ ಆರ್ಎಸ್ಎಸ್ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿದೆ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಆರ್ಎಸ್ಎಸ್ ಅನ್ನು 'ವಂಚಕ ಸಂಸ್ಥೆ' ಎಂದು ಕರೆದರೆ, ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು, ಕುರಿಯ ವೇಷದಲ್ಲಿರುವ ತೋಳ ಎಂದು ಜರಿದಿದ್ದಾರೆ.
'ಆರ್ಎಸ್ಎಸ್ ನೀಡಿರುವ 'ಕ್ಲೀನ್ ಚಿಟ್' ಅಪಮಾನಕಾರಿ ಮತ್ತು ನಾಚಿಕೆಗೇಡಿನದ್ದಾಗಿದೆ. ಅದರ ನೆಟ್ವರ್ಕ್ನ ಭಾಗವಾಗಿರುವ ಜನರಿಂದಲೇ ದೊಡ್ಡ ಮಟ್ಟದಲ್ಲಿ ಕಳ್ಳತನ ನಡೆದಿರುವುದು ಸತ್ಯ. ಇದೊಂದು ವಂಚಕ ಸಂಸ್ಥೆಯಾಗಿದೆ' ಎಂದು ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಪವನ್ ಖೇರಾ ಅವರು ಪ್ರತಿಕ್ರಿಯಿಸಿ, 'ಆರ್ಎಸ್ಎಸ್ ಕುರಿ ವೇಷ ತೊಟ್ಟಿರುವ ತೋಳವಾಗಿದೆ. ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯು ರಾಮಮಂದಿರ ಲೂಟಿ ಕುರಿತ ಆಕ್ರೋಶವಲ್ಲ, ಬದಲಿಗೆ ಅದನ್ನು ಮುಚ್ಚಿ ಹಾಕುವ ಯತ್ನವಾಗಿದೆ' ಎಂದಿದ್ದಾರೆ.
'ಭಕ್ತರ ದೇಣಿಗೆಗಳನ್ನು ರಕ್ಷಿಸಲು ಆರ್ಎಸ್ಎಸ್ ಪ್ರಾಮಾಣಿಕವಾಗಿ ಬದ್ಧವಾಗಿದ್ದರೆ, ಅದರದೇ ನೇರ ಉಸ್ತುವಾರಿಯಲ್ಲಿರುವ ಮಂದಿರದಲ್ಲಿ ಇಷ್ಟು ದೊಡ್ಡ ಪ್ರಮಾಣದ ದುರುಪಯೋಗ ಎಂದಿಗೂ ನಡೆಯುತ್ತಿರಲಿಲ್ಲ' ಎಂದು ಖೇರಾ ಹೇಳಿದ್ದಾರೆ.
'ಇದು ಆರ್ಎಸ್ಎಸ್ನ ನೈಜ ಮುಖ. ಭಕ್ತಿ ಎಂಬುದು ಒಂದು ಪ್ರದರ್ಶನ, ಲೂಟಿ ಎಂಬುದು ಅವರ ವೃತ್ತಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

