ಕಾಸರಗೋಡು: ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ವಿವಿಧ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ವಲಯದ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಿ ದಂಡ ಹೇರಿದೆ. ದೇಲಂಪಾಡಿ ಪಂಚಾಯತಿಯ ಅಡೂರ್ನಲ್ಲಿರುವ ಸ್ಟೋರ್, ಹೋಟೆಲ್, ಮಾರ್ಟ್ ಸಂಸ್ಥೆಗಳಲ್ಲೂ, ಬದಿಯಡ್ಕದ ಅಪಾರ್ಟ್ಮೆಂಟ್ನಲ್ಲೂ, ಮಧೂರಿನ ಪಟ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಅವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ನಡೆಸಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 20,000 ರೂ. ದಂಡ ಹೇರಲಾಗಿದೆ.
ಕುಂಬಳೆಯ ರಸ್ತೆಬದಿ ಕೆರೆ ನಿರ್ಮಿಸಿ ಅದಕ್ಕೆ ತ್ಯಾಜ್ಯವನ್ನು ತಂದು ಹಾಕಲು ಸೌಕರ್ಯ ಏರ್ಪಡಿಸಿದ ಹಿನ್ನೆಲೆಯಲ್ಲಿ ಸ್ಥಳದ ಮಾಲಕನಿಗೆ 5000ರೂ. ದಂಡ ಹೇರಲಾಗಿದೆ. ಪನತ್ತಡಿ ಸೂಪರ್ ಮಾರ್ಕೆಟ್ನಲ್ಲಿ ಪ್ಲಾಸ್ಟಿಕ್ ಬಾಳೆಯೆಲೆ ಸಹಿತದ ನಿಷೇಧಿತ ಉತ್ಪನ್ನಗಳನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮಾಲಕನಿಂದ 10,000 ರೂ. ದಂಡ ವಸೂಲು ಮಾಡಿ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಲಾಗಿದೆ. ತಪಾಸಣಾ ತಂಡದಲ್ಲಿ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ಮುಖಂಡ ಕೆ.ವಿ. ಮುಹಮ್ಮದ್ ಮದನಿ, ಸದಸ್ಯ ಜೋಸ್ ವಿ.ಎಂ, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಕೆ.ಎಂ. ಬಶೀರ್, ಬಾಬುರಾಜ್ ಪಿ.ಕೆ, ಸುಜಾ ಎ, ಮೀನಾ ಕುಮಾರಿ ಕೆ, ಸೌಮ್ಯಾ ಕೆ. ಭಾಗವಹಿಸಿದ್ದರು.

