ತಿರುವನಂತಪುರಂ: 80 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) 'ಪ್ರಿಯದರ್ಶಿನಿ' ಬಸ್ ಶನಿವಾರ ಪೊನ್ಮುಡಿ ಸಮೀಪದ ಆರಾಮ್ ವಲವು ಬಳಿ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊನ್ಮುಡಿಯಿಂದ ತಿರುವನಂತಪುರಂಗೆ ಬಸ್ ಮರಳುತ್ತಿದ್ದ ವೇಳೆ ಸಂಜೆ ಸುಮಾರು 5 ಗಂಟೆಗೆ ಅಪಘಾತ ಸಂಭವಿಸಿದೆ. ಕಡಿದಾದ ತಿರುವಿನಲ್ಲಿ ಬಸ್ ಚಲಿಸುತ್ತಿದ್ದಾಗ ವಾಹನದ ಬ್ರೇಕ್ ವೈಫಲ್ಯ ಉಂಟಾಗಿದೆ. ಇದರಿಂದ ಚಾಲಕ ಬಸ್ನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಬಸ್ ರಸ್ತೆ ಬದಿಯ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ, ರಸ್ತೆ ಇಳಿಜಾರಿನತ್ತ ಅದು ಮತ್ತಷ್ಟು ಜಾರುವುದು ತಪ್ಪಿದ್ದು, ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ.
ಚಾಲಕನ ಸಮಯೋಚಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಪೊನ್ಮುಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ರಸ್ತೆಯಲ್ಲಿ ಹಲವಾರು ಕಡಿದಾದ ತಿರುವುಗಳಿದ್ದು, ಘಟನೆ ನಡೆದಾಗ ಬಸ್ ಕಿಕ್ಕಿರಿದು ತುಂಬಿತ್ತು ಎಂದೂ ಅವರು ಹೇಳಿದ್ದಾರೆ.
ಬಸ್ನಲ್ಲಿದ್ದ ಬಹುತೇಕ ಪ್ರಯಾಣಿಕರು ಮಹಿಳೆಯರಾಗಿದ್ದರು. ಎಲ್ಲರೂ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

