ಮಾದಕದ್ರವ್ಯ ವ್ಯಸನದ ವಿರುದ್ಧ ಹೋರಾಡಲು 100 ವಾರಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಘೋಷಿಸಿದ್ದಾರೆ. 'ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ' ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದ್ದಾರೆ.
ಮಾದಕದ್ರವ್ಯ ಸಾಗಣೆಯನ್ನು ಹತ್ತಿಕ್ಕುವ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ತೀವ್ರಗೊಳಿಸಿದ್ದು, ಈ ನಿಟ್ಟಿನಲ್ಲಿ ಗಣನೀಯ ಸಂಖ್ಯೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ಸಹಸ್ರಾರು ಕೋಟಿ ರೂ. ಮೌಲ್ಯದ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಅವರು ತಿಳಿಸಿದ್ದಾರೆ. ಮಾದಕ ವಸ್ತುಗಳ ಬಳಕೆ ಯುವಜನತೆಯ ಭವಿಷ್ಯಕ್ಕೆ ಅತಿ ದೊಡ್ಡ ಅಪಾಯವಾಗಿದೆಯೆಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ.
ಯುವ ವ್ಯಕ್ತಿಯೊಬ್ಬ ಮಾದಕದ್ರವ್ಯ ವ್ಯಸಕ್ಕೆ ಬಲಿಯಾದಲ್ಲಿ, ಇದರಿಂದ ನಷ್ಟವಾಗುವುದು ಕೇಲ ಓರ್ವನಿಗಲ್ಲ, ಒಂದು ಕನಸು ಕೂಡಾ ನಷ್ಟವಾಗುತ್ತದೆ. ಶತ್ರು ರಾಷ್ಟ್ರಗಳು ನಮ್ಮ ಯುವಜನರನ್ನು ಮಾದಕದ್ರವ್ಯ ವ್ಯಸನದ ಜಾಲದೊಳಗೆ ಸೆಳೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಅವರ ಭಯೋತ್ಪಾದನೆ ಪ್ರೇರಿತ ಕಾರ್ಯಸೂಚಿಯ ಭಾಗವಾಗಿ ಮಾದಕದ್ರವ್ಯಗಳ ಪೂರೈಕೆಯಿಂದ ಲಾಭಪಡೆದು, ನಮ್ಮ ದೇಶಗಳನ್ನು ನಾಶಪಡಿಸುವ ಗುರಿಯನ್ನು ಅವು ಹೊಂದಿವೆ ಎಂದು ಮೋದಿ ಆಪಾದಿಸಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿಯವರು, ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸಲು ರಾಷ್ಟ್ರವ್ಯಾಪಿಯಾಗಿ ಜೈ ಭಾಗಿಧಾರಿ ಉಪಕ್ರಮದಡಿ ಮುಂದಿನ 100 ವಾರಗಳ ಕಾಲ ಈ ಅಭಿಯಾನವು ಪ್ರತಿ ರವಿವಾರ ನಡೆಯಲಿದೆ ಎಂದರು.
ಇಂದು ದೇಶಾದ್ಯಂತ ''ನಶಾಮುಕ್ತ ಯುವ ಅಭಿಯಾನ''ವನ್ನು ಆರಂಭಿಸಲಾಗಿದೆ. ಸಾಮೂಹಿಕವಾಗಿ ಮಾಡುವ ಕೆಲಸಕ್ಕೆ ಅಗಾಧವಾದ ಶಕ್ತಿಯಿದೆ. ಇಂದು, ಈ ಶಕ್ತಿಯಿಂದ ಪ್ರೇರಣೆ ಪಡೆದು ಈ ಅಭಿಯಾನವು ಪ್ರತಿಯೊಬ್ಬ ಯುವ ವ್ಯಕ್ತಿಯ ಹೃದಯವನ್ನು ಸ್ಪರ್ಶಿಸಲಿದೆಯೆಂದು ಪ್ರಧಾನಿ ತಿಳಿಸಿದರು. ಮಾದಕದ್ರವ್ಯ ವ್ಯಸನದ ವಿರುದ್ಧದ ಹೋರಾಟದಲ್ಲಿ ತನ್ನ ಸರಕಾರವು ದೃಢವಾಗಿ ಯುವಜನರನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.
''ಮಾದಕದ್ರವ್ಯ ಸಾಗಾಣಿಕೆದಾರರು ಹಾಗೂ ಮಾದಕದ್ರವ್ಯ ವ್ಯಸನದ ವಿರುದ್ಧ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಮೊದಲಿಗೆ ಹೋಲಿಸಿದರೆ ಈಗ ಹೆಚ್ಚು ಹೆಚ್ಚು ಬಂಧನಗಳನ್ನು ನಡೆಸಲಾಗುತ್ತದೆ. ಕೋಟ್ಯಂತರ ರೂ. ಮೌಲ್ಯದ ಮಾದಕ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ವಿರುದ್ಧ ಸರಕಾರವ ಎಷ್ಟು ಕಠಿಣವಾದ ನಿಲುವನ್ನುತಾಳಿದೆಯೆುಂದನ್ನು ಇದು ತೋರಿಸುತ್ತದೆ ಎಂದರು.
ಮಾದಕದ್ರವ್ಯಗಳಿಂದ ದೂರವುಳಿಯುವುದಾಗಿ ಲಕ್ಷಾಂತರ ಮಂದಿ ಯುವಜನರು ಪ್ರತಿಜ್ಞೆ ಮಾಡಿದ್ದಾರೆ ಹಾಗೂ ಮುಂದಿನ 100 ವಾರಗಳಲ್ಲಿ ಈ ಅಭಿಯಾನವು ತೀವ್ರಗತಿಯನ್ನು ಪಡೆಯಲಿದೆ. ಮುಂದಿನ ನೂರು ವಾರಗಳು ಮಾದಕದ್ರವ್ಯ ಮುಕ್ತ ಭಾರತವನ್ನು ಸೃಷ್ಟಿಸುವತ್ತ 100 ಬಲಿಷ್ಠ ಹೆಜ್ಜೆಗಳಾಗಲಿವೆ ಎಂದು ಮೋದಿ ಘೋಷಿಸಿದರು.
ಯುವಜನರನ್ನು ದೇಶದ ಅಮೃತ ಪೀಳಿಗೆ ಎಂದು ಬಣ್ಣಿಸಿದ ಅವರು, 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿರ್ಮಿಸುವ ಗುರಿಯನ್ನು ಸಾಧಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆಂದು ಹೇಳಿದರು. ದೇಶಕ್ಕೆ ಯುವಜನರ ಶಕ್ತಿ, ಕಲ್ಪನೆ ಹಾಗೂ ಪ್ರತಿಭೆಯ ಅಗತ್ಯವಿದೆ. ಮಾದಕದ್ರವ್ಯ ವ್ಯಸನದಿಂದ ಮುಕ್ತರಾಗಿರುವುದು ದೇಶಕ್ಕೆ ಹಾಗೂ ನಿಮ್ಮ ಸ್ವಂತ ಬದುಕಿಗೆ ನಿರ್ಣಾಯಕವಾದುದಾಗಿದೆ ಎಂದು ಮೋದಿ ಯುವಜನತೆಗೆ ಕರೆ ನೀಡಿದರು.

