ನವದೆಹಲಿ (PTI): 'ಪ್ರಯಾಗರಾಜ್ನಲ್ಲಿರುವ ತ್ರಿವೇಣಿ ಸಂಗಮವು ಆಧ್ಯಾತ್ಮಿಕ ಮಹತ್ವದ ಸ್ಥಳ ಮಾತ್ರವಲ್ಲ; ಅದು ಅದ್ಭುತವಾದ ಸೂಕ್ಷ್ಮಜೀವಿಗಳ ಮಹಾ ವಿನಿಮಯ ಕೇಂದ್ರ' ಎಂದು ಹೊಸ ಪುಸ್ತಕವೊಂದು ವಿವರಿಸುತ್ತದೆ.
ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಅಜಯ್ ಕುಮಾರ್ ಸೋನಕರ್ ಅವರ 'ದಿ ರಿವರ್ ದಟ್ ರಿಮೆಂಬರ್ಸ್: ಮೈಕ್ರೊಬಯೊಲಾಜಿಕಲ್ ಇಂಟೆಲಿಜೆನ್ಸ್ ಆಫ್ ನೇಚರ್' ಎನ್ನುವ ಪುಸ್ತಕವು ಪ್ರಯಾಗರಾಜ್ ಸಂಗಮದಲ್ಲಿ ಗಂಗಾ ನದಿಯು ಹೇಗೆ ವಿಶಿಷ್ಟ ಸೂಕ್ಷ್ಮಜೀವಿ ಪ್ರಯೋಗಾಲಯವಾಗಿ ಬದಲಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ.
ಸೂಕ್ಷ್ಮ ಜೀವವಿಜ್ಞಾನದೊಂದಿಗೆ ಸಾಂಸ್ಕೃತಿಕ ನಂಟನ್ನು ಬೆಸೆಯುವ ಮೂಲಕ ಅವರು ಪ್ರಯಾಗರಾಜ್ ಸಂಗಮವನ್ನು ಹೊಸ ರೀತಿಯಲ್ಲಿ ಅನ್ವೇಷಿಸುವ ಪ್ರಯತ್ನ ನಡೆಸಿದ್ದಾರೆ.
'ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತರು ಪ್ರತಿ ಬಾರಿ ಮುಳುಗಿ ಏಳುವಾಗಲೂ ಲಕ್ಷಾಂತರ ಸೂಕ್ಷ್ಮಜೀವಿಗಳು ವಿನಿಮಯವಾಗುತ್ತವೆ. ಕುಂಭಮೇಳದಂತಹ ಕಾರ್ಯಕ್ರಮದಲ್ಲಿ ಇದರ ಸಾಂದ್ರತೆ ಉತ್ತುಂಗ ಸ್ಥಿತಿಯಲ್ಲಿ ಇರುತ್ತದೆ. ಇದೊಂದು 'ವೈರಲ್ ಸಂಗಮ ಸ್ಥಳ' ಎನ್ನುತ್ತಾರೆ ಸೋನಕರ್.
'ನದಿ ಕೇವಲ ನೀರಿನ ಹರಿವಲ್ಲ; ಅದು ಬದುಕು, ಸಂಸ್ಕೃತಿ, ಪ್ರಕೃತಿಯನ್ನು ಬೆಸೆಯುವ ಜೀವನಾಡಿ. ಸಮೃದ್ಧ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಗಂಗಾ ನದಿಯು ಅಪಾರ ಸಂಖ್ಯೆಯ, ವೈವಿಧ್ಯಮಯ ಸೂಕ್ಷ್ಮಜೀವಿಗಳಿಗೂ ನೆಲೆಯಾಗಿದೆ' ಎನ್ನುತ್ತಾರೆ ಸೋನಕರ್. ಈ ಪುಸ್ತಕವನ್ನು ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ.
'ವಿದೇಶಿ ತಳಿಯ ಬ್ಯಾಕ್ಟೀರಿಯಾ ಪತ್ತೆ'
ದೇಶದ ವಿವಿಧ ಭಾಗಗಳಿಂದ ಪ್ರಯಾಗರಾಜ್ಗೆ ಬರುವ ಭಕ್ತರು ತಮ್ಮೊಂದಿಗೆ, ನಿರ್ದಿಷ್ಟ ಪರಿಸರಕ್ಕೆ ಹೊಂದಿಕೊಂಡ ವಿಶಿಷ್ಟ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರಗಳನ್ನೂ ತರುತ್ತಾರೆ. ಪವಿತ್ರ ಸ್ನಾನದ ಮೂಲಕ ಇವು ವಿನಿಮಯವಾಗುತ್ತವೆ. ಕಳೆದ ವರ್ಷದ ಮಹಾಕುಂಭ ಮೇಳವು ದೇಶ, ವಿದೇಶಗಳ 66 ಕೋಟಿಗೂ ಹೆಚ್ಚು ಭಕ್ತರನ್ನು ಪ್ರಯಾಗರಾಜ್ಗೆ ಆಕರ್ಷಿಸಿತ್ತು. ವಿದೇಶಿ ಬ್ಯಾಕ್ಟೀರಿಯಾಗಳ ತಳಿಯನ್ನೂ ವಿಜ್ಞಾನಿಗಳು ಇಲ್ಲಿನ ಸಂಗಮದಲ್ಲಿ ಗುರುತಿಸಿದ್ದಾರೆ ಎಂದು ಪುಸ್ತಕ ವಿವರಿಸುತ್ತದೆ.

