ಕಾಸರಗೋಡು: ಕರ್ಗಲ್ಲು ಯಕ್ಷ ಮಾರ್ಗ-ತೆಂಕುತಿಟ್ಟು ಯಕ್ಷಗಾನದ ಪ್ರಾಥಮಿಕ ಹಂತದ ನಾಟ್ಯ ಪ್ರಸ್ತುತಿಯ ದಾಖಲೀಕರಣ ಪಠ್ಯ ಲೋಕಾರ್ಪಣೆ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಜರುಗಿತು. ಯಕ್ಷ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಈ ದಾಖಲೀಕರಣದ ಕಿರು ಭಾಗವನ್ನು ಬಿಡುಗಡೆಗೊಳಿಸಿದರು. ಕಲಾವಿದರಾದ ಶಂಭಯ್ಯ ಕಂಜರ್ಪಣೆ, ಕಲಾವಿದ ಉಪನ್ಯಾಸಕ ಡಾ. ಶ್ರುತಕೀರ್ತಿರಾಜ ಉಜಿರೆ, ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಸುಮಿತ್ರ ಆರ್ ಮಯ್ಯ ,ಶ್ರೀಮುಖ ಎಸ್ ಆರ್ ಮಯ್ಯ , ಶ್ರೀ ರಾಜ ಎಸ್ ಆರ್ ಮಯ್ಯ ಉಪಸ್ಥಿತರಿದ್ದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಆರಂಭದಿನದಿಂದ ಕಲೆ -ಸಂಸ್ಕೃತಿ- ಸಾಹಿತ್ಯವನ್ನು ಉಳಿಸಿ ಬೆಳೆಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಪ್ರಯತ್ನಶೀಲವಾಗಿದ್ದು, ಈ ನಿಟ್ಟಿನಲ್ಲಿ ಇದರ ಮುಂದಿನ ಪ್ರಯತ್ನವಾಗಿ ಹಿಂದಿನ, ಇಂದಿನ ಯಕ್ಷಗಾನದ ನಾಟ್ಯ ಪ್ರಸ್ತುತಿಯನ್ನು ಗಮನಿಸಿ, ತೆಂಕುತಿಟ್ಟಿನ ಏಕೈಕ ಕಲಾವಿದರಾಗಿರುವಂತಹ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ಅಮೂಲ್ಯ ನಾಟ್ಯ ಸಂಪತ್ತನ್ನು ಸಂರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸು ಉದ್ದೇಶದಿಂದ ದಾಖಲೀಕರಣ ಪಠ್ಯ ಹೊರತರಲಾಗಿದೆ. ಈ ಯೋಜನೆಗೆ ಕೆ.ಕೆ.ಶೆಟ್ಟಿ ಅಹಮದ್ ನಗರ, ಶ್ರೀ ವಾಸುದೇವ ಐತಾಳ ಪಣಂಬೂರು, ಶ್ರೀ ಮಹಾಬಲೇಶ್ವರ ಭಟ್ ಎಡಕ್ಕಾನ, ಶ್ರೀ ಮಧುರ ಉಪಾಧ್ಯ ಬೆಂಗಳೂರು ಇವರು ಆರ್ಥಿಕ ಸಹಕಾರ ಮಾಡಿದ್ದು, ಮುಂದಿನ ದಿನಗಳಲ್ಲಿ ಯಕ್ಷಗಾನವು ವಿಶ್ವರಂಗದಲ್ಲಿ ಶಾಶ್ವತವಾಗಿ ಮೆರೆಯುವಂತಾಗಲು ಈ ಕೆಲಸಕಾರ್ಯಗಳು ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಲಿದೆ.
ದಾಖಲೀಕರಣಕ್ಕೆ ಕಲಾವಿದರಾದ ಶ್ರೀ ಶಂಭಯ್ಯ ಕಂಜರ್ಪಣೆ, ಶ್ರೀ ಮಧೂರು ಗೋಪಾಲಕೃಷ್ಣ ನಾವಡ, ಶ್ರೀ ಲಕ್ಷ್ಮಣ ಕುಮಾರ್ ಮರಕಡ, ಶ್ರೀ ಶಿವಾನಂದ ಪೆರ್ಲ ಸಹಕರಿಸಿದರೆ ,ಚಿತ್ರೀಕರಣವನ್ನು ಶ್ರೀಮುಖ ಮಯ್ಯ ಎಸ್. ವಿ. ವಿಷನ್, ಶ್ರೀ ಕಾರ್ತಿಕ ಕರ್ಗಲ್ಲು ಇವರು ದಾಖಲಿಸಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಆಸಕ್ತರಿಗೆ ಅಧ್ಯಯನಕ್ಕೆ ಮುಂದಿನ ದಿನಗಳಲ್ಲಿ ಈ ದಾಖಲೀಕರಣ ಲಭ್ಯವಾಗಲಿರುವುದಾಗಿ ಪ್ರಕಟಣೆ ತಿಳಿಸಿದೆ.



