ನವದೆಹಲಿ: ಸಂಸತ್ತಿನ ಆವರಣದಲ್ಲಿ ರಾಮಮಂದಿರದ ದೇಣಿಗೆ ಕಳವು ಪ್ರಕರಣವನ್ನು ಖಂಡಿಸಿ ಇಂಡಿಯಾ ಒಕ್ಕೂಟದ ಸಂಸದರು ನಡೆಸಿದ 'ಚಂದಾ ಚೋರಿ' ಪ್ರಹಸನವು ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದ ಪಪ್ಪು ಯಾದವ್ ಮತ್ತು ಅವಧೇಶ್ ಪ್ರಸಾದ್ ವಿರುದ್ಧ ಸಂಸದೆ ಬಾನ್ಸುರಿ ಸ್ವರಾಜ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಂಸತ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ, ಪಪ್ಪು ಯಾದವ್ ಮತ್ತು ಅವಧೇಶ್ ಪ್ರಸಾದ್ ಅವರು ಧಾರ್ಮಿಕ ನಂಬಿಕೆಗಳನ್ನು ಅಣಕಿಸಿದ್ದಾರೆ. ಇದು ಭಾರತೀಯ ಸಂಪ್ರದಾಯಗಳನ್ನು ಅಪಹಾಸ್ಯ ಮಾಡುವ ಪ್ರಯತ್ನ ಎಂದು ಆರೋಪಿಸಲಾಗಿದೆ.
ಸಂಸತ್ ಭವನದ ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಸದ ಪಪ್ಪು ಯಾದವ್ ಕಾವಿ ವಸ್ತ್ರ ಧರಿಸಿ ಅರ್ಚಕರ ವೇಷದಲ್ಲಿ ಕಾಣಿಸಿಕೊಂಡರು. ಇದೇ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರ ಸಂಸದರು ಭಕ್ತರ ಪಾತ್ರದಲ್ಲಿ ಕಾಣಿಕೆ ಸಲ್ಲಿಸುವಂತೆ ಅಭಿನಯಿಸಿದರೆ, ಪಪ್ಪು ಯಾದವ್ ಆ ಕಾಣಿಕೆಯನ್ನು ಕಳವು ಮಾಡುವ ಸಾಂಕೇತಿಕ ದೃಶ್ಯವನ್ನು ಪ್ರದರ್ಶಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಸಂಸದರ ವಿರುದ್ಧ ವಾರಣಾಸಿಯಲ್ಲಿ ಕೂಡ ಪ್ರಕರಣ ದಾಖಲಾಗಿದೆ.

