ಕಾಸರಗೋಡು: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 25 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ 'ಸೇವಾ ಸಂಕಲ್ಪ ಅಭಿಯಾನ್'ದ ಅಂಗವಾಗಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಆಯುರಾರೋಗ್ಯಕ್ಕಾಗಿ ಪೂಜೆ ಹಾಗೂ ವಿಶೇಷ ಹರಕೆಗಳನ್ನು ಸಲ್ಲಿಸಲಾಗುವುದು. 'ಆಶೀರ್ವಾದ್ ಕಾ ದಿಯಾ'ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ಹಾಗೂ ಕಾರ್ಯಕರ್ತರ ಮನೆಗಳು ಮತ್ತು ಸಂಸ್ಥೆಗಳಲ್ಲಿ ದೀಪ ಬೆಳಗಿಸಲಾಗುವುದು.
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. 'ಸ್ವಪ್ನ ಭಾರತ, 'ವಿಕಸಿತ ಭಾರತ 2047' ಮುಂತಾದ ವಿಷಯಗಳನ್ನು ಆಧರಿಸಿ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ 8ನೇ ತರಗತಿಯಿಂದ ಪ್ಲಸ್ ಟು ವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲೆಯೊಂದಿಗೆ ಭಾಷಣ ಸ್ಪರ್ಧೆ ನಡೆಸಲಾಗುವುದು. ನರೇಂದ್ರ ಮೋದಿಯವರ ಸಾರ್ವಜನಿಕ ಜೀವನ ಹಾಗೂ ಕಾರ್ಯಚಟುವಟಿಕೆಗಳನ್ನು ಆಧರಿಸಿ ಬೀದಿ ನಾಟಕಗಳನ್ನೂ ಆಯೋಜಿಸಲಾಗುವುದು.
ಸೆಪ್ಟೆಂಬರ್ 25ರಿಂದ ಅಕ್ಟೋಬರ್ 7ರ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಮಹಿಳಾ ಮೋರ್ಚಾ ಸಂಯುಕ್ತವಾಗಿ 'ಅಂಗನವಾಡಿ ಉತ್ಸವ' ಆಯೋಜಿಸಲಿದೆ. ಇದರ ಅಂಗವಾಗಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಗುವುದು.
'ಬದಲಾವಣೆಯ ನೇರ ನೋಟ' ಎಂಬ ಹೆಸರಿನಲ್ಲಿ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅವು ಫಲಾನುಭವಿಗಳ ಜೀವನದಲ್ಲಿ ಸೃಷ್ಟಿಸಿರುವ ಬದಲಾವಣೆಗಳನ್ನು ಪರಿಚಯಿಸುವ ಸಾಮಾಜಿಕ ಮಾಧ್ಯಮ ರೀಲ್ಸ್ಗಳನ್ನು ಸಿದ್ಧಪಡಿಸಿ ಪ್ರಚಾರ ಮಾಡಲಾಗುವುದು.
'ಸೇವಾ ಜ್ಯೋತಿ ಕಲಶ ಯಾತ್ರೆ' 'ಸೇವಾ ಮಹಾಕುಂಭ್', 'ಸೇವಾ ಸೇತು ಅಭಿಯಾನ್', ವಿಕಸಿತ ಕೇರಳ' ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.

