ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 1,003ಕ್ಕೆ ಏರಿಕೆಯಾಗಿದೆ. ಭದ್ರತಾ ಪಡೆಗಳು ದೇಶದ ಎಂಟು ಜಿಲ್ಲೆಗಳಲ್ಲಿ ಅನೇಕ ಮೃತದೇಹಗಳನ್ನು ಪತ್ತೆ ಮಾಡಿವೆ.
ಅನೇಕ ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರುತ್ತಿದೆ. ನಿರಂತರ ಮಳೆ ಮತ್ತು ಹೊಸ ಪ್ರವಾಹದ ಎಚ್ಚರಿಕೆಯ ನಡುವೆಯೂ, ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿಯು ಹರಸಾಹಸ ಪಡುತ್ತಿದ್ದಾರೆ.
583 ವಿದೇಶಿಯರು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಂದಿ ನಾಪತ್ತೆಯಾಗಿದ್ದಾರೆ. ಸುಮಾರು 12 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಹಾಗೂ ನಿರ್ವಹಣಾ ಪ್ರಾಧಿಕಾರದ (ಎನ್ಡಿಆರ್ಆರ್ಎಂಎ) ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 21 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಂತ್ರಸ್ತರ ಸ್ಥಳಾಂತರ ಮತ್ತು ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯ ನಡೆಯುತ್ತಿದೆ.
19 ಸೇತುವೆಗಳು, ಅನೇಕ ಹೆದ್ದಾರಿಗಳು ಕೊಚ್ಚಿಹೋಗಿವೆ. ಈ ಪೈಕಿ ಒಂದು ಹೆದ್ದಾರಿ ನೇಪಾಳ ಹಾಗೂ ಚೀನಾ ಜತೆಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.
ಈ ದುರಂತದಲ್ಲಿ ಚೀನಾದ 16 ಜನರು ಮೃತಪಟ್ಟಿದ್ದಾರೆ. ಟಿಬೆಟ್ನಲ್ಲಿ ಸುಮಾರು 550 ಜನರು ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮ ವರದಿಗಳು ತಿಳಿಸಿವೆ.
ಪ್ರವಾಹದ ಎಚ್ಚರಿಕೆ: ದೇಶದ ಪೂರ್ವ, ಮಧ್ಯ ಮತ್ತು ಪಶ್ಚಿಮ ಭಾಗದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ. ನುವಾಕೋಟ್ ಮತ್ತು ರಸುವಾ ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಸಣ್ಣ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನದಿ ತೀರದಲ್ಲಿ ವಾಸಿಸುವ ಜನರು ಜಾಗರೂಕರಾಗಿರಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಬಾಲೆನ್ ಶಾ ನೇಪಾಳ ಪ್ರಧಾನಿದುರಂತವು ಊಹಿಸಲು ಅಸಾಧ್ಯ. ಹೃದಯ ವಿದ್ರಾವಕವಾಗಿದೆ
ಪ್ರವಾಹದಲ್ಲಿ ಕಣ್ಮರೆಯಾದವರ ಚಿತ್ರಗಳನ್ನು ತ್ರಿಭುವನ್ ವಿಶ್ವವಿದ್ಯಾಲಯದ ಟೀಚಿಂಗ್ ಆಸ್ಪತ್ರೆಯ ಮುಂದೆ ಅಂಟಿಸಿದ್ದನ್ನು ಗಮನಿಸಿದ ಸಂತ್ರಸ್ತರು-ಪಿಟಿಐ ಚಿತ್ರ
ಭಾರತಕ್ಕೆ ತೇಲಿಬಂದ 13 ಮೃತದೇಹಗಳು
ಗೋರಖ್ಪುರ (ಉತ್ತರಪ್ರದೇಶ) (ಪಿಟಿಐ): ನೇಪಾಳದಲ್ಲಿ ಉಂಟಾದ ಪ್ರವಾಹದಿಂದ ಉತ್ತರ ಪ್ರದೇಶದ ಕುಶಿನಗರಕ್ಕೆ ನಾರಾಯಣಿ ನದಿ ಹಾಗೂ ಗೋರಖ್ಪುರ ಜಿಲ್ಲೆಯ ಗಂಡಕಿ ನದಿಯ ಮೂಲಕ 13 ಅಪರಿಚಿತ ಮೃತದೇಹಗಳು ತೇಲಿಬಂದಿವೆ.
ಎಲ್ಲ ಮೃತದೇಹಗಳನ್ನು ಗೋರಖ್ಪುರದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಸಂರಕ್ಷಿಸಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ಮೃತದೇಹಗಳನ್ನು ಇರಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ನಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಏಮ್ಸ್ನ ಕಾರ್ಯಕಾರಿ ನಿರ್ದೇಶಕಿ ಡಾ.ವಿಭಾ ದತ್ತಾ ತಿಳಿಸಿದ್ದಾರೆ.
ಪ್ರವಾಹದಲ್ಲಿ ಮೃತಪಟ್ಟವರ ದೇಹವನ್ನು ನುವಾಕೊಟ್ ಸೇನಾ ಕೇಂದ್ರದತ್ತ ಕೊಂಡೊಯ್ದ ಪೊಲೀಸರು-ಪಿಟಿಐ ಚಿತ್ರ

