ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ವೀರಸಾಮಿ ಶಿವಜ್ಞಾನಂ ಅವರು ನಾಪತ್ತೆಯಾಗಿದ್ದಾರೆ.
ಆಗಸ್ಟ್ 26ರಿಂದ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ, ಅವರನ್ನು ಪತ್ತೆಹಚ್ಚಲು ನೆರವಾಗುವಂತೆ 'ದೆಹಲಿ ತಮಿಳು ವಕೀಲರ ಸಂಘ' ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಬಸ್ನಲ್ಲಿರುವ ಫೋಟೊ ಲಭ್ಯ
ದುರಂತ ಸಂಭವಿಸಿದಾಗ ನ್ಯಾಯಮೂರ್ತಿ ಶಿವಜ್ಞಾನಂ ಅವರು ತಮಿಳುನಾಡಿನ ಯಾತ್ರಿಕರ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು. ಯಾತ್ರಿಕರು ಬಸ್ನಲ್ಲಿ ತೆಗೆಸಿಕೊಂಡಿದ್ದ ಫೋಟೊವೊಂದು ಅವರ ಉಪಸ್ಥಿತಿಯನ್ನು ದೃಢಪಡಿಸಿದೆ.
ಆಗಸ್ಟ್ 26ರ ಮುಂಜಾನೆ ಅವರು ಕೊನೆಯ ಬಾರಿಗೆ ವಾಟ್ಸಾಪ್ ಕಾಲ್ ಮೂಲಕ ತಮ್ಮ ಪತ್ನಿಯೊಂದಿಗೆ ಮಾತನಾಡಿದ್ದರು. ತದನಂತರ ಅವರಿಂದ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ.
ದುರಂತದ ವೇಳೆ ನ್ಯಾಯಮೂರ್ತಿ ಶಿವಜ್ಞಾನಂ ಅವರಿದ್ದ ಬಸ್ ನಾವಿದ್ದ ಬಸ್ನಿಂದ ಕೇವಲ 100-200 ಮೀಟರ್ ದೂರದಲ್ಲಿತ್ತು ಎಂದು ತಿಮುರೆಯಲ್ಲಿರುವ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ನೇಪಾಳ ಗಡಿ ಬಳಿ ರಕ್ಷಿಸಲ್ಪಟ್ಟ ಸಹ ಯಾತ್ರಿಕರು ಮಾಹಿತಿ ನೀಡಿದ್ದಾರೆ. ಇದರಿಂದ ಕುಟುಂಬಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಕೇಂದ್ರ, ಸಿಜೆಐಗೆ ಮನವಿ:
ದೆಹಲಿ ತಮಿಳು ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಈ ವಿಷಯವನ್ನು ತಕ್ಷಣವೇ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕೆಂದು ಆಗ್ರಹಿಸಿದೆ. ನೇಪಾಳ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದೆ. ನ್ಯಾ.ವೀರಸಾಮಿ ಶಿವಜ್ಞಾನಂ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಸುಮಾರು 34 ವರ್ಷಗಳ ಸುದೀರ್ಘ ಕಾರ್ಯ ನಿರ್ವಹಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ ಇವರನ್ನು, 2025ರ ಜುಲೈ 23ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ನಿಂದ ಹಿರಿಯ ವಕೀಲರಾಗಿ ನೇಮಕ ಮಾಡಲಾಗಿತ್ತು.
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಲವು ಮಂದಿ ತಮಿಳು ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

