ನವದೆಹಲಿ: ರಸ್ತೆ ಎಲ್ಲರಿಗೂ ಸೇರಿದ್ದು, ಪಾದಚಾರಿಗಳಿಗೆ ರಸ್ತೆಯನ್ನು ದಾಟಿ ಜೀವಂತವಾಗಿ ಇನ್ನೊಂದು ಬದಿ ತಲುಪುವ ಹಕ್ಕಿದೆ ಎಂದು ದಿಲ್ಲಿ ನ್ಯಾಯಾಲಯ ಹೇಳಿದೆ.
ಆರ್ಎಂಎಲ್ ಆಸ್ಪತ್ರೆಯ ಹೊರಗೆ ಇಬ್ಬರು ಪಾದಚಾರಿಗಳು ಮೃತಪಟ್ಟ 2021ರ ಹಿಟ್ ಆಯಂಡ್ ರನ್ ಪ್ರಕರಣದಲ್ಲಿ ದಲೀಪ್ ಕುಮಾರ್ ಎಂಬಾತನಿಗೆ ನೀಡಲಾಗಿದ್ದ ಶಿಕ್ಷೆ ಮತ್ತು ಎರಡು ತಿಂಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿಯುವ ಸಂದರ್ಭ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲೇರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
''ಢಿಕ್ಕಿಯ ತೀವ್ರತೆ'' ಸಿಸಿಟಿವಿಯಲ್ಲಿ ಸೆರೆಯಾಗಿದೆ ಮತ್ತು ಪ್ರತ್ಯಕ್ಷದರ್ಶಿಗಳಿಂದ ದೃಢಪಟ್ಟಿದೆ ಎಂದು ಗಮನಿಸಿದ ನ್ಯಾಯಾಧೀಶರು, ಮಧ್ಯರಾತ್ರಿ ಆಸ್ಪತ್ರೆಯ ಗೇಟ್ ಬಳಿ ರಸ್ತೆ ದಾಟುತ್ತಿದ್ದ ಪಾದಚಾರಿಗಳನ್ನು ತಪ್ಪಿಸಲು ಸಾಧ್ಯವಾಗದ ವೇಗದಲ್ಲಿ ಚಾಲಕ ವಾಹನ ಚಾಲನೆ ಮಾಡುವುದು ನಿಯಮ ಬಾಹಿರವಾಗಿದೆ. ಇದು ಪರಿಣಾಮಗಳ ಬಗ್ಗೆ ಯಾವುದೇ ಚಿಂತೆ ಇಲ್ಲದೆ ಮಾಡುವ ನಿರ್ಲಕ್ಷ್ಯದ ಕೃತ್ಯವಾಗಿದೆ ಎಂದು ಹೇಳಿದರು.
''ರಸ್ತೆ ಎಲ್ಲರಿಗೂ ಸೇರಿದ ಆಸ್ತಿಯಾಗಿದೆ. ಮಧ್ಯರಾತ್ರಿ ಆಸ್ಪತ್ರೆಯ ಗೇಟ್ ಹೊರಗೆ ರಸ್ತೆ ದಾಟುವ ಪಾದಚಾರಿಗೆ ಯಾವುದೇ ರಕ್ಷಾ ಕವಚ ಇರುವುದಿಲ್ಲ. ವಾಹನ ಚಾಲಕನು ಜವಾಬ್ದಾರಿಯಿಂದ ವಾಹನ ಚಲಾಯಿಸುತ್ತಾನೆ ಎಂಬ ಭರವಸೆ ಒಂದೇ ಅವನಿಗೆ ಇರುತ್ತದೆ. ಆ ಭರವಸೆಗೆ ಧಕ್ಕೆ ಬಂದಾಗ ಕಾನೂನು ಮಧ್ಯ ಪ್ರವೇಶಿಸುತ್ತದೆ. ಕಾನೂನಿನ ಉದ್ದೇಶ ಸೇಡು ತೀರಿಸಿಕೊಳ್ಳುವುದಲ್ಲ. ಬದಲಿಗೆ ರಸ್ತೆ ದಾಟಿ ಜೀವಂತವಾಗಿ ತಲುಪುವ ಮಾನವನ ಹಕ್ಕನ್ನು ಎತ್ತಿ ಹಿಡಿಯುವುದಾಗಿದೆ'' ಎಂದು ನ್ಯಾಯಾಲಯ ಆಗಸ್ಟ್ 17ರ ಆದೇಶದಲ್ಲಿ ತಿಳಿಸಿದೆ.
ಫೆಬ್ರವರಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ನ್ಯಾಯಾಧೀಶರು, ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಕುಮಾರ್ಗೆ 2 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ 15 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದರು. ಮ್ಯಾಜಿಸ್ಟ್ರೇಟ್ ವಿಧಿಸಿರುವ ಶಿಕ್ಷೆ ತೀರಾ ಕಡಿಮೆಯಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
2021 ಜುಲೈ 27ರ ಮಧ್ಯರಾತ್ರಿ ದಲೀಪ್ ಕುಮಾರ್ ಅತಿ ವೇಗದಿಂದ ಚಲಾಯಿಸುತ್ತಿದ್ದ ಎಸ್ಯುವಿ ವಾಹನ ಆರ್ಎಂಎಲ್ ಆಸ್ಪತ್ರೆಯ ಗೇಟ್ ಸಂಖ್ಯೆ 4ರ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಮೀನಾ ಭಂಡಾರಿ ಮತ್ತು ರಾಜನ್ ಎಂಬವರಿಗೆ ಢಿಕ್ಕಿ ಹೊಡೆದಿತ್ತು. ಘಟನೆಯ ನಂತರ ದಲೀಪ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಮೀನಾ ಭಂಡಾರಿ ಮತ್ತು ರಾಜನ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದರು.

