ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳವಾರ ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದೆ.
ಕಾವೇರಿ ನದಿ ನೀರಿನ ಮಟ್ಟ ಹೆಚ್ಚುತ್ತಲೇ ಇದ್ದು, ಭಾಗಮಂಡಲ ಮತ್ತು ಸಂಪರ್ಕ ರಸ್ತೆಯ ಮೇಲೆ ನದಿ ನೀರು ಹರಿಯುತ್ತಿರುವ ಪರಿಣಾಮ ಈ ರಸ್ತೆ ಬಂದ್ ಆಗಿದೆ. ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಬ್ಯಾರಿಕೇಡ್ಗಳನ್ನು ಅಳವಡಿಸಿ ರಸ್ತೆ ಮಾರ್ಗವನ್ನು ಬಂದ್ ಮಾಡಿದ್ದಾರೆ. ಮಂಗಳವಾರ ಸಂಜೆ ಭಾರಿ ಮಳೆಯಿಂದಾಗಿ ತಲಕಾವೇರಿ ಬಳಿ ಗುಡ್ಡ ಕುಸಿದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ.
ನಾಪೋಕ್ಲು ಸಂಪರ್ಕ ರಸ್ತೆ ಪೂರ್ಣ ಬಂದಾಗಿದೆ. ಇನ್ನು ತಲಕಾವೇರಿ, ಚೇರಂಗಾಲಕ್ಕೆ ಸಂಪರ್ಕ ಕಡಿತಗೊಂಡಿದೆ. ಎರಡು ದಿನಗಳಿಂದ 75 ಇಂಚಿಗೂ ಅಧಿಕ ಮಳೆಯಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 42 ಇಂಚು ಮಳೆಯಾಗಿತ್ತು.


